Sunday, April 27, 2014

ದೇವರು ಭೂಮಿಗೆ ಕಳಿಸಿಬಿಟ್ಟ...

ಇನ್ನೂ ನಾನಾಗ ಭೂಮಿಗೆ ಬಂದಿರಲೇ ಇಲ್ಲ. ದೇವರ ಬಳಿಯಲ್ಲೇ ಖುಷಿಯಾಗಿದ್ದೆ. ಭೂಮಿಯ ಮೇಲಿನ ಯಾವ ಬಂಧಗಳೂ, ಸಂಬಂಧಗಳೂ ನನಗಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ದೇವರು ನನ್ನ ಬಳಿಗೆ ನೀನು ಭೂಮಿಗೆ ಹೋಗು , ಹೊಸ ರೂಪ ಕೊಟ್ಟು ನಿನ್ನನ್ನು ಸೃಷ್ಟಿಸುತ್ತೇನೆ ಎಂದ. ಊಹೂಂ ಜೋರಾಗಿ ಅಳುವುದೊಂದೇ ನನ್ನ ಕೆಲಸ ಆಗ. ಇಲ್ಲ ಸ್ವರ್ಗವನ್ನು ಬಿಟ್ಟು ನಾನು ಹೋಗಲಾರೆ ಎಂದು. ದೇವರು ನಗುತ್ತ ನಗುತ್ತ ಪುಟ್ಟಿ...ನೀನು ಹೋಗಲೇಬೇಕು ಎಂದ. ದೇವರೇ ನಿನ್ನನ್ನು ಬಿಟ್ಟು ನಾನು ಭೂಮಿಗೆ ಹೋದರೆ ಅಲ್ಲಿ ನನ್ನನ್ಯಾರು ನೋಡ್ಕೋಳ್ತಾರೆ ? ಎಂಬ ನನ್ನ ಪ್ರಶ್ನೆಗೆ, ಸಂಬಂಧವೆಂಬ ಬಂಧನದಲ್ಲಿ ನೀನು ಸೇರಿ ಹೋಗ್ತೀಯಾ.ನಿನಗೆ ಅಲ್ಲಿರಲು ಇಷ್ಟವಾಗದಿದ್ದರೆ ನಾ ನಿನ್ನನ್ನು ಮತ್ತೆ ವಾಪಸ್ ಕರೆದುಕೊಳ್ಳುತ್ತೇನೆ ಎಂದ.

ಇಷ್ಟವಿಲ್ಲದ ಭೂಮಿಗೆ ನಾನೊಬ್ಬಳೇ ಬಂದೆ. ಎಲ್ಲರೂ ಅಪರಿಚಿತರೆಂಬ ಭಾವನೆಯಲ್ಲಿ. ಇಷ್ಟು ದಿನ ದೇವರೇ ನನ್ನನ್ನು ನೋಡ್ಕೊಳ್ತಿದ್ದರು.. ಇನ್ಮುಂದೆ ಯಾರು ನೋಡಿಕೊಳ್ಳುತ್ತಾರೆ ಎಂದು ಯೋಚಿಸುತ್ತಿದ್ದೆ. ನಾ ಹುಟ್ಟಿದಾಗ ಎಲ್ಲರೂ ಸಂಭ್ರಮಿಸಿದರು. ಮನೆಯ ಮುದ್ದಿನ ಮಗಳಿವಳು ಎಂಬ ಖುಷಿಯ ಭಾವದಲ್ಲಿ.. ಬೆಳೆಯುತ್ತ ಬೆಳೆಯುತ್ತ ಪ್ರೀತಿಯ ವೃತ್ತದಲ್ಲಿ ಸೇರಿ ಹೋದೆ. ಊಹಿಸಿರದಕ್ಕಿಂತಲೂ ಬದುಕು ಸ್ಪುಟವಾಗಿ ಕಾಣಿಸುತ್ತಿತ್ತು. ಅಪ್ಪನ ಬುದ್ದಿ ಮಾತುಗಳೆಲ್ಲಾ ಹೊಸತನ ಹೊಸರೂಪ ಕೊಟ್ಟಿತು.. ತನ್ನನ್ನು ತಾನು ಪ್ರೀತಿಸುವುದಕ್ಕಿಂತಲೂ ಹೆಚ್ಚು ನನ್ನನ್ನೇ ಪ್ರೀತಿಸುವ ಅಮ್ಮನೆಂಬ ಪ್ರೀತಿಯ ಹೂವನ್ನು ಮುಡಿಗೇರಿಸಿಕೊಂಡೆ. ಎಂದಿಗೂ ಬಾಡದ ಹೂವೆಂದು ತಿಳಿದು..ಸಂಬಂಧಗಳೇ ಬದುಕೆಂಬ ಪಾಠವನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳುತ್ತ ಇಲ್ಲಿಯವರೆಗೆ ಬಂದಿದ್ದೇನೆ.

ಇಂದಿಗೂ ದೇವರಿಗೆ ಥ್ಯಾಂಕ್ಸ್ ಹೇಳುತ್ತ ಬಂದಿದ್ದೇನೆ..ನನ್ನನ್ನು ಭೂಮಿಗೆ ಕಳುಹಿಸಿದ್ದಕ್ಕೆ. ಸ್ವರ್ಗಕ್ಕಿಂತಲೂ ಹೆಚ್ಚು ಖುಷಿಯನ್ನು ಮನೆಯಲ್ಲಿಯೇ ಕರುಣಿಸಿದ್ದಕ್ಕೆ. ದೇವರಿಗಿಂತಲೂ ಹೆಚ್ಚೆಂಬ ಅಮ್ಮನನ್ನು ಬದುಕಾಗಿಸಿದ್ದಕ್ಕೆ..ಪ್ರೀತಿ ಎಂಬ ಪದಕ್ಕೆ ಹಲವಾರು ಅರ್ಥವನ್ನು ತೋರಿಸಿದ್ದಕ್ಕೆ..ಸ್ವರ್ಗವೆಂಬ ಪದಕ್ಕೆ ಅರ್ಥ ಸಿಕ್ಕಿದ್ದು ಭೂಮಿಯಲ್ಲಿಯೇ.. ಇನ್ಯಾವತ್ತಾದರೂ ದೇವರು ನನ್ನ ಬಳಿ ಬಂದು ಸ್ವರ್ಗಕ್ಕೆ ಹೋಗೋಣವೆಂದರೆ ನಾನಂತೂ ಹೋಗಲಾರೆ. ದೇವರೇ ಈ ಬದುಕಿನಲ್ಲಿ ನನ್ನನ್ನು ಶಾಶ್ವತವಾಗಿ ಇರಿಸಿಬಿಡುವೆಯಾ? ಎಂದರೆ ಅವನಲ್ಲಿ ಉತ್ತರವೇ ಇಲ್ಲ. ದೇವರಿಗಿಂತಲೂ ಹತ್ತಿರವಾಗಿಬಿಟ್ಟಳು ಅಮ್ಮ. ನಗುವುದೊಂದನ್ನು ಮಾತ್ರ ಕಲಿಸಿಕೊಟ್ಟಳು. ದೇವರು ನನ್ನನ್ನು ಭೂಮಿಗೆ ಕಳುಹಿಸಿದ್ದೇನೋ ನಿಜ. ಆದರೆ ಅಮ್ಮ ಮಾತ್ರ ಎಂದಿಗೂ ನನ್ನನ್ನು ಹಿಂತಿರುಗಿ ದೇವರ ಬಳಿ ಕಳುಹಿಸಲು ಇಷ್ಟಪಡಲಾರಳು ಎಂಬುದು ನೂರಕ್ಕೆ ಸಾವಿರದಷ್ಟು ನಿಜ. .ಪ್ರತೀ ದಿನಗಳನ್ನು ಕಳೆಯುವಾಗ ಅನಿಸುವುದೆಂದರೆ ಮತ್ತಿನ್ನೆಂದೂ ದೇವರ ಬಳಿ ಹೋಗಬಾರದೆಂದು... ದೇವರಿಗಿಂತ ಭೂಮಿಯ ಬಂಧಗಳೇ ಹೆಚ್ಚು ಹತ್ತಿರ..