Thursday, September 26, 2013

ಬೆಳದಿಂಗಳಲ್ಲೊಂದು ಒಂಟಿತನ

ಅದೊಂದು ಸುಂದರ ಬೆಳದಿಂಗಳ ರಾತ್ರಿ... ತಂಪು ತಂಗಾಳಿ ಮನದಲಿ ಸೋಕುತ್ತಿರಲು ಕನಸುಗಳ ಪದಗುಚ್ಚವು ಕವಲೊಡೆದು ಬಂದಿತ್ತು...ನಕ್ಷತ್ರಗಳನ್ನು ಎಣಿಸುತ್ತ, ಎಣಿಸುತ್ತ ಚಂದಿರನ ನಗೆಯನ್ನು  ನೋಡುತ್ತಿದ್ದೆ...ಭಾವನೆಗಳ ಹೊಸ್ತಿಲು ನೆಲಕ್ಕೆ ತಾಕದಂತೇ ಹಾರುತಿರಲು ಮನಸಿಗೆ ಮುದ ನೀಡುವ ಬಚ್ಚಿಟ್ಟ ನವಿಲುಗರಿ...ಆಗಲೇ ಕಾಡುವ  ಒಂಟಿತನ....ಅದೆಷ್ಟು ಅದ್ಭುತ ಎಂದರೆ ನನ್ನ ಮನಸ್ಸನ್ನು ನಾನೇ ಅರ್ಥಮಾಡಿಕೊಳ್ಳಲು, ಹೊಸ ಕನಸುಗಳಿಗೆ ಜಾಗ ಮಾಡಿಕೊಡಲು, ಒಬ್ಬಂಟಿಯಾಗಿ ಮಾತ್ರ ಆ ಜಗಕ್ಕೆ ಹೋಗಲು ಸಾಧ್ಯ..ಓ ಕನಸುಗಳೇ ನೀವೆಂದು ನನಸಾಗಿರುವಿರೆಂದು ಕೇಳುವುದು ನನ್ನ ಒಂಟಿತನದಲ್ಲಿಯೆ.....ಯಾಕೋ ಏನೋ ಆ ಬೆಳದಿಂಗಳ ರಾತ್ರಿಯಲಿ ಚಂದಿರನಿಗಿಂತಲೂ ನನ್ನ ಕನಸುಗಳೇ ಸುಂದರವಾಗಿ ಕಂಡಿದ್ದವು..ಚಂದಿರನ ಜೊತೆಗೆ ನನ್ನ ಕನಸುಗಳನ್ನು ಹೋಲಿಸಿಕೊಳ್ಳುತ್ತ  ಒಬ್ಬಳೇ ಕೂತುಬಿಟ್ಟೆ....ರಾಯರು ಬಂದರು ಹಾಡೇಕೋ ನೆನಪಾಗುತ್ತಿತ್ತು..ಮುಂಬಾಳ ಸವಿಗನಸನು ಹೆಣೆಯಲು ಆ ಚಂದ್ರನೂ ನಸುನಕ್ಕು ಬೆಳಕನ್ನು ಹರಿಸಿದನು..

.ಅದೇ ಬೆರಗಾಗಿ ಸಾಗಿದಷ್ಟು ದೂರ ದೂರ ಕಂಗಳು ಮಿಟಿಮಿಟಿಸುತ್ತಿತ್ತು..ಒಂದು ಕವನವನ್ನು ಬರೆಯೋಣವೆಂದರೆ ಪದಗಳ ಮಿತಿಯೇ ತಾಕದಲ್ಲ.ಕೆಲವೊಂದು ದಿನವೇ ಅಷ್ಟು ಸುಂದರವಾಗಿರುತ್ತೆ..ಕಾರಣವೇನೆಂದು ಗೊತ್ತಿರುವುದಿಲ್ಲ..ಆದರೆ ಭಾವಗಳು ಎದ್ದು ಓಡಾಡುತ್ತಿರುತ್ತವೆ. ಸಣ್ಣಗೆ ಬೀಳುತ್ತಿದ್ದ ತುಂತುರು ಮಳೆಗೆ ಸಾಟಿಯಾಗುವೆಯೇನೋ ಎಂಬಂತೆ ''ತುಂತುರು ಅಲ್ಲಿ ನೀರ ಹಾಡು ಕಂಪನಾ ಇಲ್ಲಿ ಪ್ರೀತಿ ಹಾಡು'' ಎಂಬ ಹಾಡನ್ನು ಗುನಿಗುನಿಸುತ್ತಿತ್ತು ಮನಸ್ಸು..ಮಿಂಚಿನ ಒಂದು ಬೆಳಕು ಮನದಲ್ಲಿ ಸುಳಿಯದಿದ್ದರೂ ದೂರದಿಂದಲೇ ನೋಡಿ ಖುಷಿಪಡುವಂತೆ ಮಾಡಿತ್ತು.ಒಂಟಿತನವೆಂಬುದು ಮನಸ್ಸನ್ನು ಹಾಡಿಸಿ, ಕೇಳಿಸಿ ಎಂದೋ ಓದಿದ ಸರ್ದಾಜಿಯ ಜೋಕನ್ನು ನೆನಪು ಮಾಡಿಸಿ ದೊಡ್ಡದಾಗಿ ಒಬ್ಬಳೇ ನಗುವಂತೆ ಮಾಡಿತ್ತು...ಒಂಟಿತನದ ಸೋನೆ ಮಳೆಯು ಹೃದಯವು ಒದ್ದೆಯಾಗದಂತೇ ತಡೆದು, ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ ಎಂದು ದಾರಿಹೋಕರ ಮೊಬೈಲ್ ನಿಂದ ಮತ್ತೊಂದು ಪದ್ಯ ಕೇಳಿದೊಡನೆ, ಬೆಳಕು ಶುಭ್ರವಾಗಿ ಮುಖದ ಮೇಲೆಯೇ ಬಿದ್ದಿತು.

ಸಮಯ ಇನ್ನು ಹತ್ತಾದರೂ ನೆಚ್ಚಿತೊಂದು ಬೆಟ್ಟದ ಕನಸುಗಳು, ಬೇಕುಬೇಡಗಳು, ಕಷ್ಟ ಸುಖಗಳೆಲ್ಲ ಸೇರಿ ಅದೇನೋ ಹೊಸ ರೂಪ..ಎಲ್ಲರೂ ಹೆದರುವ ಒಂಟಿತನದಲ್ಲಿ ಇಷ್ಟೊಂದು ಹಿತವಿದೆಯಾ? ಎಂದು ಆ ಸಮಯಕೆ ತೋಚದಿರಲಿಲ್ಲ..ಎಲ್ಲರೂ ಬೇಡ ವೆಂದು ದೂಡುತ್ತ ಕಳುಹಿಸುವ  ಒಂಟಿತನಕ್ಕೂ ತನ್ನದೇ ಆದ ಭಾವಗಳಿವೆ, ಮನಸುಗಳನು ಓದುವ ಸಾಮರ್ಥ್ಯವಿದೆ..ಎಷ್ಟೋ ಆಗದಿರುವ ಕೆಲಸವನ್ನು ಯೋಚಿಸಿ ಪೂರ್ಣಗೊಳಿಸುವ ಅದ್ಭುತ ಶಕ್ತಿಯಿದೆ..

ಆದರೆ ನಾವು ಧನಾತ್ಮಕವಾಗಿ ತೆಗೆದುಕೊಳ್ಳಬೇಕಷ್ಟೆ..ಕೆಲವೊಂದು ಬಾರಿ ಅನಿಸುವುದು ಬೇಸರವೆಂದರೆ ನಮ್ಮ ಮನದ ಯೋಚನೆಗಳು ಋಣಾತ್ಮಕವಾಗಿ ಹರಿದಾಗ..ಆದರೆ  ಸ್ನೇಹ, ಪ್ರೀತಿ, ವಿಶ್ವಾಸದ ಸುಖದಲ್ಲಿ ಪ್ರೀತಿ ಪಾತ್ರದವರೆಡೆ ಯೋಚಿಸಲು ಸಮಯವನ್ನು ಮೀಸಲಿರಸಬೇಕೆಂದರೆ  ಅದು ಒಂಟಿತನದಲ್ಲಿಯೇ....