Saturday, December 14, 2013

ಕತ್ತಲೆಂಬ ಭ್ರಮೆಯಲ್ಲಿ ಬೆಳಕಿನ ಹುಡುಕಾಟ...

ಜೀವನಾ ಹೇಗಿದೆ ಎಂಬ ಪ್ರಶ್ನೆಗೆ ಎಷ್ಟೋ ಸಲ ಬರುವ ಉತ್ತರ ಬೋರಿಂಗ್ ಎಂದು.. ಕಾರಣವೇನೆಂದು ಯಾರಿಗೂ ತಿಳಿದಿಲ್ಲ..ನಮಗೆ ನಾವೇ ಬೋರ್ ಆಗಿಬಿಟ್ಟಿದ್ದೇವಾ? ನಮ್ಮೊಳಗಿನ ಕನಸುಗಳು, ನಾಳಿನ ಭರವಸೆಗಳು, ಏನನ್ನಾದರೂ ಸಾಧಿಸಲೇಬೇಂಬ ಛಲವೆಲ್ಲ ಏನಾಯಿತು..ಅಯ್ಯೋ ಲೈಫ್ ತುಂಬಾ ಬೋರು ಎಂಬ ಮಾತಿಗಿಳಿಯುವ  ಮೊದಲು ಯಾಕೆ ಬೋರ್ ಆಗ್ತಾ ಇದೆ..ಎಲ್ಲವೂ ನಮ್ಮಿಷ್ಟದಂತೆಯೇ ನಡೆಯುತ್ತಿದೆ ಆದರೂ ಬೋರಿಂಗ್ ಎಂದರೆ  ಕಾರಣ ಇದಕ್ಕೆ ನಾವೇ ಹೊರತು ಬೇರೆಯವರ್ಯಾರೂ ಪರಿಹಾರ ಕೊಡಲು ಸಾಧ್ಯವಿಲ್ಲ..ಜಗತ್ತಿನಲ್ಲಿರುವ ಜನರೆಲ್ಲ ಸಲಹೆಗಳನ್ನು ಕೊಡಬಲ್ಲರು ಆದರೆ ನಮ್ಮ ಮನಸ್ಸಿಗೆ ಅರ್ಥಮಾಡಿಸಿಕೊಳ್ಳುವವರು ನಾವೊಬ್ಬರೇ.. ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಾವೇ ಆಗಿರುತ್ತೇವೆ..

ಅವರೇ ಆಯ್ದುಕೊಂಡ ಅವರಿಷ್ಟದ ಸಬ್ಜೆಕ್ಟ್ , ಇಂತಹ ವೃತ್ತಿಗೇ ಹೋಗಬೇಕೆಂದು ಅವರಿಷ್ಟದ ಕೆಲಸವನ್ನೇ ಆಯ್ದುಕೊಂಡಿರುತ್ತಾರೆ..ಹುಚ್ಚುಕೋಡಿ ಮನಸಿಗೆ ಕಡಿವಾಣ ಹಾಕಿಕೊಳ್ಳಬೇಕಾದ ಅವಶ್ಯಕತೆ ಇದೆಯೋ, ಅಥವಾ ಅನಿವಾರ್ಯತೆ ಇದೆಯೋ ಗೊತ್ತಿಲ್ಲ.. ಆದರೆ ಜೀವನದ ಪ್ರತೀಯೊಂದು ಕೆಲಸದಲ್ಲೂ, ಪ್ರತೀಯೊಂದು ಕ್ಷಣದಲ್ಲೂ ಖುಷಿಯಾಗಿರಬೇಕೆಂಬುದು ಎಲ್ಲರ ಹಂಬಲ..ಯಾರಾದರೂ ಪ್ರೀತಿಯಿಂದ ಮಾತನಾಡಿಸಿದಾಗ ಎಲ್ಲೋ ಒಂದು ಕಡೆ ಸಂತಸವೆಂಬ ಬೆಳಕಿನ ಕಿರಣವು ಹರಿಯುತ್ತದೆ.. 

ಪ್ರತೀ ಕತ್ತಲೂ ಸೂರ್ಯೋದಯಕ್ಕಾಗಿ ಕಾಯುತ್ತಿರುತ್ತದೆ. ಬದುಕಿನ ಪ್ರತೀಯೊಂದು ತಿರುವಿನಲ್ಲೂ ಒಂದೊಂದು ಕಾಲುದಾರಿಯನ್ನಾದರೂ ಹುಡುಕುತ್ತ ಸಾಗಲೇಬೇಕು. ಇಷ್ಟವೋ, ಕಷ್ಟವೋ, ಅನಿವಾರ್ಯವೋ ಆಯ್ದುಕೊಂಡಿರುವ ಕೆಲಸವನ್ನು ಪ್ರೀತಿಯಿಂದ ಮಾಡಲೇಬೇಕಲ್ಲವೇ? ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದಕ್ಕಿಂತ, ಕಾಲು ಚಾಚುವಷ್ಟು ಉದ್ದದ ಹಾಸಿಗೆಯನ್ನೇ ಮಾಡಿಕೊಳ್ಳುವೆ ಎಂಬುವುದು ಜಾಣತನ.

ಎಲ್ಲವೂ ಮನಸ್ಸಿಗೆ ಸಂಬಂಧಿಸಿದ್ದು.. ಪ್ರಾನ್ಸ್ ನಲ್ಲೊಬ್ಬ ಮನೋವಿಜ್ಷಾನಿ ಇಮಾಯಿಲ್ ಕುವೇ ಎಂಬುವವನು ರೋಗಿಗಳಿಗೆ ಸಕಾರಾತ್ಮಕ ಮನೋಭಾವವನ್ನು ತುಂಬಿಸಿ ಲಕ್ಷಾಂತರ ಜನರನ್ನು ಗುಣಪಡಿಸಿದ್ದನಂತೆ.. ''ನಾನು ಆರೋಗ್ಯವಾಗಿರುವೆ. ನನ್ನ ಆರೋಗ್ಯ ಸುಧಾರಿಸುತ್ತದೆ, ಎಂದು ಮನಸ್ಸಿಗೆ ಮತ್ತೆ ಮತ್ತೆ ಹೇಳಿಕೊಳ್ಳಬೇಕೆಂದು , ಪ್ರತೀದಿನ ರಾತ್ರಿ ಮಲಗುವ ಮುಂಚೆ ಅದೇ ಯೋಚನೆಯಲ್ಲಿ ಮಲಗಬೇಕು" ಎಂದು ಹೇಳುತ್ತಿದ್ದನಂತೆ..ಇಂತಹ ಸಕಾರಾತ್ಮಕ ಮನಸ್ಸಿನ ಸ್ಥಿತಿಯು ಮತ್ತಷ್ಟು ವರುಷಗಳು ಸಂತಸವನ್ನು ತಂದುಕೊಡಬಲ್ಲುದು..

ಪ್ರತೀ ಬೋರಿಂಗ್ ಎಂಬ ಹೇಳಿಕೆಯ ಸುತ್ತಲೇ ಎಂಜಾಯ್ ಎಂಬ ಪದವು ಸುತ್ತುತ್ತಿರುತ್ತೆ.. ಆದರೆ ನಮ್ಮ ಭಾವನೆಗಳು ಮಾತ್ರ ಯಾವುದೋ ಒಂದಕ್ಕೆ ಅಂಟಿಕೊಂಡು ಒದ್ದಾಡುತ್ತಿರುತ್ತದೆ..ಖುಷಿಯ ಚಿಲುಮೆಯನು, ಸಕಾರಾತ್ಮಕವಾದ ಭಾವಗಳನ್ನು ನಮಗೆ ನಾವೇ ಸೃಷ್ಟಿಸಿಕೊಳ್ಳಬೇಕು..

Monday, November 25, 2013

ವಿಳಾಸವಿಲ್ಲದ ಕನಸಿನ ಪ್ರೀತಿಯ ಸಾಲುಗಳು.....

ಆವತ್ತು ಏನೋ ಬರೆಯೋಣ ಅಂತ ಹೋದ್ರೆ ಬರೆಯುತ್ತಿದ್ದುದು ಪ್ರೀತಿಯ ಬಗೆಗೆ... ದೊಡ್ಡದಾಗಿ ಪ್ರೀತಿಯ ಹಾಡುಗಳೇ  ಕಿವಿಗೆ ಬಂದು ಅಪ್ಪಳಿಸುತ್ತಿತ್ತು.. . ನಿನ್ನ ಕನಸಿನ ಹುಡುಗ ಹೇಗಿರಬೇಕು ಎಂದು ರೂಂಮೇಟ್ ಕೇಳಿದ ಪ್ರಶ್ನೆಗೆ ನಾನು ಉತ್ತರ ನೀಡಲೇಬೇಕಾ? ಎಂದು  ಯೋಚಿಸಲು ಹೊರಟಿದ್ದೆ..  ಅವನ್ಯಾರೋ  ಒಂದು ದಿನ ಜೀವನದಲ್ಲಿ ಬರುವವನ ಬಗೆಗೆ ಕಟ್ಟಿದ ಕನಸುಗಳನ್ನೆಲ್ಲ ಹೇಳತೊಡಗಿದ್ದೆ.. ಬಹುಶಃ ಆ ಕನಸುಗಳಿಗೂ ಒಂದು ಪರಿಧಿಯೆಂಬುದಿಲ್ಲ ..ಮಿತಿಯೆಂಬುದಿಲ್ಲ. ಪಿಟೀಲು ಕುಯ್ಯಲು ನನಗೆ ಹೇಳಿಕೊಡಬೇಕಿಲ್ಲ...

ಅವನೆಂದರೆ ಪ್ರಪಂಚದಲ್ಲಿ ಅವನಿಗಿಂತಲೂ ನಾನ್ಯಾರನ್ನೂ ಹೆಚ್ಚು ಪ್ರೀತಿಸಬಾರದು..ನನ್ನ ಹುಚ್ಚು ಭಾವುಕತೆಗಳ ನಡುವೆ ಅವನದ್ದೊಂದು ಭಾವ ಸೇರಿ ಆಗಬೇಕು ಭಾವಗೀತೆಯ ಬದುಕು .. ಹಟಕ್ಕೆ ಬಿದ್ದ ಮನಸಿನ ಚಿತ್ರಗಳನೊಮ್ಮೆ ಬಣ್ಣ ಹಾಕಿ ಹೃದಯದ ಫ್ರೇಮ್ ನಲ್ಲಿ ಕಟ್ಟಿಸಿಡಬೇಕು.. ಕೆಲವೊಂದು ಬೇಸರ ಅಳು ದುಃಖಗಳ ನಡುವೆಯೂ ನನಗೆ ಅವನು ಅವಗೆ ನಾನೆಂಬ ಸಂತೋಷದ ದೋಣಿಯು ತೇಲಿ ಬಂದರೆ ಸಾಕು..ಪ್ರೀತಿಯೆಂಬ ಬೆರಳಿನ ತುದಿ ತಾಕಿದಾಗಲೂ ಅದೇ ಸಂತಸವಿದ್ದರೆ ನನಗೇನು ಬೇಕು.. ದಿಟ್ಟಿಸುತ್ತ ನೋಡುವಾಗ ಚಂದ್ರನೂ ಸರಿಸಾಟಿಯಾಗಲಾರ ಬೆಳದಿಂಗಳಲ್ಲಿ.. ಹಣೆಗೆ ಹಣೆ ತಾಕುವಷ್ಟು  ಹತ್ತಿರದಿಂದ ಮಾತನಾಡಿದರೆ ಕಳೆದು ಹೋದವೇನೋ ದಿನಗಳು..ಮರೆಯಾಗದೇ ಇರುವ ಹುಚ್ಚಿನ ಕನಸುಗಳಿಗೆ ನನಸೆಂಬ ಹಣೆಪಟ್ಟಿಯನ್ನು ಕೊಟ್ಟರೆ ಅದೆಂಥ ಸುಂದರ ಬದುಕು..

ಒಂದೇ ಒಂದು ದಿನ ಇಬ್ಬರಲ್ಲಿ ಒಬ್ಬರು ಮನೆಯಲ್ಲಿಲ್ಲದಿದ್ದರೂ ಕೇಳಿಸುತ್ತಿರುವಂತೆ  ಮಾತುಗಳು .. ಅವನ ಪ್ರತೀ ಮೌನದಲ್ಲಿಯೂ ನನ್ನ ಧ್ವನಿಯನ್ನು ಹೊರಹೊಮ್ಮಿಸಬೇಕಿದೆ..ಅವನು ನನ್ನ ಬದುಕಿನ ಭಾಗವಾಗಿರದೇ ನನ್ನ ಬದುಕೆಂಬ ಪಯಣಕ್ಕೆ ಇಟ್ಟುಬಿಡುವೆ ಅವನ ಹೆಸರನ್ನು..ಕಟ್ಟಿದ ಆಸೆಗಳ ಗೋಪುರದ ತುತ್ತ ತುದಿಯವೆರಗೂ  ಜೊತೆಗೇ ಕೈ ಹಿಡಿದು ನಡೆದರೆ ಅದ್ಯಾವ ಸುಸ್ತು, ದಣಿವು ಆಗಲಾರದು..ಹೊಟ್ಟೆ ಹುಣ್ಣಾಗಿಸುವಂತೆ ನಕ್ಕಾಗ , ಅದೇ ನಗುವಿನ ಕಣಗಳೆಲ್ಲ ಅವನನ್ನೇ ನೆನಪಿಸುವಂತದ್ದರೆ ನಾನೆಂದೂ ನಗುತ್ತಲೇ ಇರುವೆನು.


                                               ಕಳೆಯಬೇಕು ನೂರು ವರುಷಗಳು,
                                              ಯೌವ್ವನದಿ, ಮುಪ್ಪಿನಲಿ ಕೂಡಿ ಸಾಗುತ್ತ..
                                              ಸಾಲು  ಸಾಲು ದೀಪಗಳ ಬೆಳಕನ್ನು,
                                              ಕಣ್ಣಿನಲಿ , ಹೃದಯದಲಿ , ಮನಸಿನಲಿ ಕಾಣುತ್ತ...
                                              ಅಲೆಗಳಾಗಿ ಬರುವ ಖುಷಿಯಲಿ, ಬೇಸರದಿ
                                              ಒಬ್ಬರಿಗೊಬ್ಬರಿಗೆ ಆಸರೆಯಾಗುತ್ತ..
                                             ಸೊಗಸಾದ ಮೌನದ ಗಳಿಗೆಯಲಿ
                                              ಪ್ರೀತಿಯಿಂದ ದಿಟ್ಟಿಸುತ್ತ ...
                                             ಬೆಳದಿಂಗಳಲಿ ಕೈಹಿಡಿದು
                                              ತುತ್ತನ್ನೊಂದು ತಿನ್ನಿಸುತ್ತ
                                             ಮಗದೊಮ್ಮೆ ಮತ್ತೊಮ್ಮೆ ಕಳೆಯಬೇಕು
                                               ನೂರು ವರುಷಗಳನು


 ಸಂಬಂಧಗಳೆಂದರೆ ಭದ್ರವಾಗಿರಬೇಕು.. ಚಿನ್ನಕ್ಕಿಂತಲೂ ಹೊಳಪಿರಬೇಕು.. ಚಿನ್ನವನ್ನು ಫಾಲಿಶ್ ಮಾಡಿದಂತೆ ಹೆಚ್ಚು ಹೆಚ್ಚು ಪ್ರೀತಿಗಳಿಂದ ಸಾಗುತ್ತಿರಬೇಕು.... ಯಾರು ಸರಿ ಯಾರು ತಪ್ಪೆಂಬ ವಾದಕ್ಕಿಂದ ಬದುಕನ್ನು ಪ್ರೀತಿಯಲಿ ತೇಲಿಸುವಂತೆ.. ಪ್ರತೀ ಮುಂಜಾವೂ ಅವನ ಮುಖ ನೋಡಿ ಪ್ರೀತಿಯೊಂದಿಗೆ ಆರಂಭವೇ ಆಗಬಹುದು..ತುಂತುರು ಮಳೆಗಳಲಿ ಒಂದೇ ಸಮನೆ ಎಂದೋ ಬರೆದಿಟ್ಟ ಪ್ರೀತಿಯ ಕವನವನ್ನು ಓದಿದಾಗ ಅವನಿಂದ ಭೇಷ್ ಎಂಬ ಪದಗಳಿಗೆ ಕೊರತೆಯಿರಬಾರದು..ಅವನ್ಯಾರೋ ಏನ್ ಮಾಡ್ತಾ ಇದ್ದಾನೋ ಇಷ್ಟು ಹೊತ್ತಿಗೆ.. ಅಂತ ಎಷ್ಟೋ ಸಲ ಯೋಚಿಸಿದ್ದೇನೆ..  ಪ್ರೀತಿಯ ಪತ್ರಗಳನ್ನೆಷ್ಟೋ ವಿಳಾಸವಿಲ್ಲದವನಿಗೆ, ಗೊತ್ತಿಲ್ಲದವನಿಗೆ ಬರೆದು ಭದ್ರವಾಗಿ ಇರಿಸಿದ್ದೇನೆ....ನಾನು ಒಬ್ಬಂಟಿ ಅಂತ ಯೋಚಿಸ್ತಾ ಇದ್ದಾಗ .ಬಹುಶಃ ನನಗಾಗಿ ಹುಟ್ಟಿದ ಅವನೂ ನನ್ನಂತೆಯೇ ಯೋಚಿಸುತ್ತ ಇರಬಹುದೇನೋ....

Thursday, September 26, 2013

ಬೆಳದಿಂಗಳಲ್ಲೊಂದು ಒಂಟಿತನ

ಅದೊಂದು ಸುಂದರ ಬೆಳದಿಂಗಳ ರಾತ್ರಿ... ತಂಪು ತಂಗಾಳಿ ಮನದಲಿ ಸೋಕುತ್ತಿರಲು ಕನಸುಗಳ ಪದಗುಚ್ಚವು ಕವಲೊಡೆದು ಬಂದಿತ್ತು...ನಕ್ಷತ್ರಗಳನ್ನು ಎಣಿಸುತ್ತ, ಎಣಿಸುತ್ತ ಚಂದಿರನ ನಗೆಯನ್ನು  ನೋಡುತ್ತಿದ್ದೆ...ಭಾವನೆಗಳ ಹೊಸ್ತಿಲು ನೆಲಕ್ಕೆ ತಾಕದಂತೇ ಹಾರುತಿರಲು ಮನಸಿಗೆ ಮುದ ನೀಡುವ ಬಚ್ಚಿಟ್ಟ ನವಿಲುಗರಿ...ಆಗಲೇ ಕಾಡುವ  ಒಂಟಿತನ....ಅದೆಷ್ಟು ಅದ್ಭುತ ಎಂದರೆ ನನ್ನ ಮನಸ್ಸನ್ನು ನಾನೇ ಅರ್ಥಮಾಡಿಕೊಳ್ಳಲು, ಹೊಸ ಕನಸುಗಳಿಗೆ ಜಾಗ ಮಾಡಿಕೊಡಲು, ಒಬ್ಬಂಟಿಯಾಗಿ ಮಾತ್ರ ಆ ಜಗಕ್ಕೆ ಹೋಗಲು ಸಾಧ್ಯ..ಓ ಕನಸುಗಳೇ ನೀವೆಂದು ನನಸಾಗಿರುವಿರೆಂದು ಕೇಳುವುದು ನನ್ನ ಒಂಟಿತನದಲ್ಲಿಯೆ.....ಯಾಕೋ ಏನೋ ಆ ಬೆಳದಿಂಗಳ ರಾತ್ರಿಯಲಿ ಚಂದಿರನಿಗಿಂತಲೂ ನನ್ನ ಕನಸುಗಳೇ ಸುಂದರವಾಗಿ ಕಂಡಿದ್ದವು..ಚಂದಿರನ ಜೊತೆಗೆ ನನ್ನ ಕನಸುಗಳನ್ನು ಹೋಲಿಸಿಕೊಳ್ಳುತ್ತ  ಒಬ್ಬಳೇ ಕೂತುಬಿಟ್ಟೆ....ರಾಯರು ಬಂದರು ಹಾಡೇಕೋ ನೆನಪಾಗುತ್ತಿತ್ತು..ಮುಂಬಾಳ ಸವಿಗನಸನು ಹೆಣೆಯಲು ಆ ಚಂದ್ರನೂ ನಸುನಕ್ಕು ಬೆಳಕನ್ನು ಹರಿಸಿದನು..

.ಅದೇ ಬೆರಗಾಗಿ ಸಾಗಿದಷ್ಟು ದೂರ ದೂರ ಕಂಗಳು ಮಿಟಿಮಿಟಿಸುತ್ತಿತ್ತು..ಒಂದು ಕವನವನ್ನು ಬರೆಯೋಣವೆಂದರೆ ಪದಗಳ ಮಿತಿಯೇ ತಾಕದಲ್ಲ.ಕೆಲವೊಂದು ದಿನವೇ ಅಷ್ಟು ಸುಂದರವಾಗಿರುತ್ತೆ..ಕಾರಣವೇನೆಂದು ಗೊತ್ತಿರುವುದಿಲ್ಲ..ಆದರೆ ಭಾವಗಳು ಎದ್ದು ಓಡಾಡುತ್ತಿರುತ್ತವೆ. ಸಣ್ಣಗೆ ಬೀಳುತ್ತಿದ್ದ ತುಂತುರು ಮಳೆಗೆ ಸಾಟಿಯಾಗುವೆಯೇನೋ ಎಂಬಂತೆ ''ತುಂತುರು ಅಲ್ಲಿ ನೀರ ಹಾಡು ಕಂಪನಾ ಇಲ್ಲಿ ಪ್ರೀತಿ ಹಾಡು'' ಎಂಬ ಹಾಡನ್ನು ಗುನಿಗುನಿಸುತ್ತಿತ್ತು ಮನಸ್ಸು..ಮಿಂಚಿನ ಒಂದು ಬೆಳಕು ಮನದಲ್ಲಿ ಸುಳಿಯದಿದ್ದರೂ ದೂರದಿಂದಲೇ ನೋಡಿ ಖುಷಿಪಡುವಂತೆ ಮಾಡಿತ್ತು.ಒಂಟಿತನವೆಂಬುದು ಮನಸ್ಸನ್ನು ಹಾಡಿಸಿ, ಕೇಳಿಸಿ ಎಂದೋ ಓದಿದ ಸರ್ದಾಜಿಯ ಜೋಕನ್ನು ನೆನಪು ಮಾಡಿಸಿ ದೊಡ್ಡದಾಗಿ ಒಬ್ಬಳೇ ನಗುವಂತೆ ಮಾಡಿತ್ತು...ಒಂಟಿತನದ ಸೋನೆ ಮಳೆಯು ಹೃದಯವು ಒದ್ದೆಯಾಗದಂತೇ ತಡೆದು, ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ ಎಂದು ದಾರಿಹೋಕರ ಮೊಬೈಲ್ ನಿಂದ ಮತ್ತೊಂದು ಪದ್ಯ ಕೇಳಿದೊಡನೆ, ಬೆಳಕು ಶುಭ್ರವಾಗಿ ಮುಖದ ಮೇಲೆಯೇ ಬಿದ್ದಿತು.

ಸಮಯ ಇನ್ನು ಹತ್ತಾದರೂ ನೆಚ್ಚಿತೊಂದು ಬೆಟ್ಟದ ಕನಸುಗಳು, ಬೇಕುಬೇಡಗಳು, ಕಷ್ಟ ಸುಖಗಳೆಲ್ಲ ಸೇರಿ ಅದೇನೋ ಹೊಸ ರೂಪ..ಎಲ್ಲರೂ ಹೆದರುವ ಒಂಟಿತನದಲ್ಲಿ ಇಷ್ಟೊಂದು ಹಿತವಿದೆಯಾ? ಎಂದು ಆ ಸಮಯಕೆ ತೋಚದಿರಲಿಲ್ಲ..ಎಲ್ಲರೂ ಬೇಡ ವೆಂದು ದೂಡುತ್ತ ಕಳುಹಿಸುವ  ಒಂಟಿತನಕ್ಕೂ ತನ್ನದೇ ಆದ ಭಾವಗಳಿವೆ, ಮನಸುಗಳನು ಓದುವ ಸಾಮರ್ಥ್ಯವಿದೆ..ಎಷ್ಟೋ ಆಗದಿರುವ ಕೆಲಸವನ್ನು ಯೋಚಿಸಿ ಪೂರ್ಣಗೊಳಿಸುವ ಅದ್ಭುತ ಶಕ್ತಿಯಿದೆ..

ಆದರೆ ನಾವು ಧನಾತ್ಮಕವಾಗಿ ತೆಗೆದುಕೊಳ್ಳಬೇಕಷ್ಟೆ..ಕೆಲವೊಂದು ಬಾರಿ ಅನಿಸುವುದು ಬೇಸರವೆಂದರೆ ನಮ್ಮ ಮನದ ಯೋಚನೆಗಳು ಋಣಾತ್ಮಕವಾಗಿ ಹರಿದಾಗ..ಆದರೆ  ಸ್ನೇಹ, ಪ್ರೀತಿ, ವಿಶ್ವಾಸದ ಸುಖದಲ್ಲಿ ಪ್ರೀತಿ ಪಾತ್ರದವರೆಡೆ ಯೋಚಿಸಲು ಸಮಯವನ್ನು ಮೀಸಲಿರಸಬೇಕೆಂದರೆ  ಅದು ಒಂಟಿತನದಲ್ಲಿಯೇ....


Tuesday, June 04, 2013

ನೀನಾಗುವೆಯಾ..?

ಬಣ್ಣವಾಗಿ ಜೀವ ತುಂಬುವೆಯಾ

ನನ್ನ ಮದರಂಗಿ ಚಿತ್ರಕೆ..

ಬೆಳಗಿನ ಕನಸಿನಲಿ ಬಂದು ತಟ್ಟಿ

ಎಬ್ಬಿಸಿ ಪ್ರೀತಿಯಿಂದ ಕರೆಯುವೆಯಾ...

ಮುಸ್ಸಂಜೆಯ ತಂಗಾಳಿಯಲಿ ಬೆಚ್ಚನೆಯ

ಕನಸುಗಳನು ನನ್ನಲ್ಲಿ ಕಾಣುವೆಯಾ..

ಜನುಮ ದಿನದಂದು ಶುಭಾಶಯ ತಿಳಿಸುವ ಮೊದಲಿಗ

ನೀನಾಗುವೆಯಾ...

ಹೊಳೆಯುವ ಉಂಗುರದ ಶುಭ್ರ

ಹರಳು ನೀನಾಗುವೆಯಾ...

ತುಟಿಯಂಚಿನಲ್ಲಿ ಬರುವ ನಗುವಿನ

ಸೌಧವಾಗುವೆಯಾ..

ಅತ್ತಾಗ ಒಲವಿನ ಲೋಕಕ್ಕೆ  ಕರೆದೊಯ್ದು

ಸಾಂತ್ವನ ಹೇಳುವೆಯಾ..

ಬಚ್ಚಿಟ್ಟ ಆಸೆಗಳಿಗೆ ಸೂತ್ರವನು ಕಟ್ಟಿ

ಆಗಸದೆತ್ತರಕೆ ಹಾರಿಸುವೆಯಾ..

ನನ್ನ ಪಾಲಿಗೆ ಎಲ್ಲವೂ ನೀನೇ

ಆಗುವೆಯೆಂದು...??


Wednesday, February 20, 2013

ಅದೇಗೆ ಕಳೆಯಿತೋ....


ಇನ್ನು ಸ್ವಲ್ಪ ದಿನಗಳು ಮಾತ್ರ.. ಈ ಕಾಲೇಜ್ ಬಿಟ್ಟು ಹೋಗ್ತೀರಾ ಬೇಜಾರಾಗ್ತಾ ಇದ್ಯಾ ? ಅಥವಾ ಖುಷಿ ಆಗ್ತಾ ಇದೆಯಾ?
ಎಂದು ಆ ಕ್ಲಾಸಿನಲ್ಲಿ ಉಪನ್ಯಾಸಕರು ಎಲ್ಲರಲ್ಲಿಯೂ  ಕೇಳಿದಾಗ ಉತ್ತರವೇ ಬಂದಿರಲಿಲ್ಲ..ಬದಲಿಗೆ ನೆನಪುಗಳ ಲೋಕಕ್ಕೆ ಪಯಣಿಸಿದ್ದೆ....
ಮೂರು ವರುಷಗಳ ಹಿಂದಿನ ಮಾತು ಆಗ ತಾನೇ ಶಿರಸಿಯಲ್ಲಿ ಪಿ.ಯು.ಸಿ ಮುಗಿಸಿದ ನನಗೆ   ಮುಂದೆಲ್ಲಿ ಎಂಬ ಪ್ರಶ್ನೆ ಕಾಡಿತ್ತು..ಅಪ್ಪ ಹತ್ತಿರ  ಕರೆದು ಉಜಿರೆಗೆ ಹೋಗು ಎಂದಾಗ ಮುಖ ಸೊಟ್ಟಗಾಗಿತ್ತು..ಏಕೆಂದರೆ ನನ್ನಲ್ಲಿ ಉಜಿರೆ ಎಂದರೆ ಕೇವಲ ಸ್ಟ್ರಿಕ್ಟ್, ಮನೆಯಿಂದ ದೂರ ಮತ್ತು ಸೆಕೆ ಜಾಸ್ತಿ  ಎಂಬ ಭಾವನೆಯಿತ್ತು.. ಮನೆಯಲ್ಲೆಲ್ಲ ಇಡೀ ದಿನವೂ  ಅದರ ಬಗ್ಗೆಯೇ ಮೀಟಿಂಗು.."ನಿಂಗೋ ಎಷ್ಟ್ ಹೇಳಿದ್ರೂ ಅಷ್ಟೆ ನಾ ಅಂತೂ ಹೋಗ್ತ್ನಿಲ್ಲೆ"
 ಎಂಬ ನನ್ನ  ವಾದದ ಕಡೆಗೆ ಅಮ್ಮನೂ ಇದ್ದಳು..ಯಾವಾಗಲೂ ನನ್ನ ಬೇಕು ಬೇಡಗಳನ್ನು , ನನ್ನ ಆ ಸೆಗಳನ್ನು ಎಲ್ಲವನ್ನೂ ಖುಷಿಯಿಂದಲೇ ನಾ ಹೇಳಿದಂತೆಯೇ  ಕೇಳುತ್ತಿದ್ದ ಅಪ್ಪನು ಉಜಿರೆಗೆ ಹೋಗುವ ವಿಷಯದಲ್ಲಿ ಮಾತ್ರ  ಸ್ಟ್ರಿಕ್ಟ್ ಆಗಿ ಕೂತಿದ್ದ..
ಅಂತೂ ಅಣ್ಣನ ಜೊತೆಗೆ ಉಜಿರೆಯ ಕಡೆಗೆ ಪ್ರಯಾಣ ಬೆಳೆಸಿದೆ ..ಉಡುಪಿಯ ವರೆಗೆ ಮಾತ್ರ ತಲುಪಿದ್ದೆವು.. ಇನ್ನೂ ಮೂರು ತಾಸುಗಳಂತೆ ಉಜಿರೆಗೆ ಎಂದಾಗ ವಾಪಸ್ಸು ಮನೆಗೆ ಹೋಗೋಣ ಎನ್ನಲು ಶುರು ಮಾಡಿದೆ ನಾನು... ಪ್ರೀತಿಯ ಮಾತುಗಳಿಂದ ಅಣ್ಣನು ಉಜಿರೆಗೂ ತಲುಪಿಸಿದ.. ಕಾಲೇಜಿಗೆ  ತಲುಪಿದ ಕೂಡಲೇ ಸ್ಥಳದಲ್ಲಿಯೇ ಅಡ್ಮಿಷನ್ ಸಿಕ್ಕಿತ್ತು..ಅದನ್ನೂ ಮಾಡಿಸಿದ ಅಣ್ಣ..
ಮನೆಗೆ ಹಿಂತಿರುಗಿದಾಗ ಅಪ್ಪನ ಮುಖದಲ್ಲಿ ಖುಷಿಯಿತ್ತು.." ಪಾಪ ನಮ್ಮನೆ ತಂಗಿ ಹತ್ರ  ಮೊಬೈಲ್ ಇಲ್ಲೆ  ನಾ ಹೆಂಗಿದ್ದ ಬೇಕಾದ್ರೂ ತೆಗೆಸಿ ಕೊಡ್ತೆ ನನ್ನ ಬಂಗಾರ " ಎಂದೆಲ್ಲಾ ನನ್ನನ್ನು ಖುಷಿ ಪಡಿಸಲು ಪ್ರಯತ್ನಿಸಿದರೂ ನನ್ನ ಮುಖದಲ್ಲಿ ನಗೆಯು ಬಂದಿರಲಿಲ್ಲ.. ಅಮ್ಮನ ತೋಳಿನಲ್ಲಿ ಅತ್ತು ಬಿಟ್ಟಿದ್ದೆ..."ನಿಂಗೆ ಮನೆ ಬೇಜಾರ್ ಬಂದ್ರೆ ಒಂದು ಫೋನ್ ಮಾಡು ನಂಗೋ ಇಬ್ರೂ ಅಲ್ಲಿ ಒಂದು ದಿನದಲ್ಲೇ ಬತ್ಯೋ" ಎಂದಾಗ ಸ್ವಲ್ಪ ಖುಷಿಯಾಯಿತು..ಅಂತೂ ಹೊರಟೆ..
ಅಂದು ಕಾಲೇಜಿನ ಮೊದಲನೇ ದಿನ ಜೊತೆಗೆ ನನ್ನ ಜನುಮದಿನ...ಗೊತ್ತಿಲ್ಲದ ಕಾಲೇಜಿನಲ್ಲಿ ಶುಭಾಷಯ ಹೇಳುವವರು ಯಾರೂ ಇರಲಿಲ್ಲ..ಆದರೂ ಸಂಭ್ರಮವಿತ್ತು ಕೆಲವೇ ದಿನಗಳಲ್ಲಿ ಆ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಿದ್ದೆ..ಐಡಿ ಕಾರ್ಡಿನ ಮೇಲೇ ವ್ಯಾಲಿಡಿಟಿಯನ್ನು ನೋಡುತ್ತ ದೇವ್ರೇ ಇನ್ನೂ ಮೂರು ವರುಷಗಳು ಇಲ್ಲೇ ಇರ್ಬೇಕಾ! ಎಂದೆನ್ನಿಸುತ್ತದ್ದರೂ ಬಹು ಬೇಗ ಹೊಂದಿಕೊಂಡಿದ್ದೆ..
ಆಗ ನಾನು ಅದೆಷ್ಟು ಮುಗ್ಧಳಾಗಿದ್ದೆಯೆಂದರೆ ಯಲ್ಲಾಪುರದವರು ಉಜಿರೆಯಲ್ಲಿ ಯಾರಾದ್ರೂ ಇದ್ರೆ ಸಾಕು ಗೊತ್ತಿಲ್ದೇ ಇದ್ರೂ ಹೋಗಿ ಮಾತನಾಡಿಸುತ್ತಿದ್ದೆ...ನನ್ನ ರೂಂಮೇಟ್ ಇದೇ ಕಾರಣಕ್ಕೆ ಯಾವಾಗಲೂ ಹೇಳ್ತಾ ಇರ್ತಿದ್ಲು.."ಏನೇ ಯಲ್ಲಾಪುರದ್ದೇನಾದ್ರೂ ಸಂಘ ಶುರು ಮಾಡ್ತೀಯ ಹೆಂಗೆ" ಎಂದು..  ಪ್ರತೀ ರಜಾದಿನಗಳಲ್ಲಿ ಧರ್ಮಸ್ಥಳ  ಮಂಜುನಾಥನ ದರ್ಶನಕ್ಕೆ ಹೋಗುತ್ತಿದ್ದೆವು..ಕ್ಲಾಸಿನಲ್ಲಿ ಚುಕ್ಕಿ ಆಟ ಆಡುತ್ತಿದ್ದ ಸಂಭ್ರಮವಂತೂ ಹೇಳತೀರದು..
ಮೂರು ವರುಷಗಳು ಅದೇಗೆ ಕಳೆಯಿತೋ ...ಒಂದೂ ಗೊತ್ತಿಲ್ಲ ..ದಿನಗಳು ಯಾರಿಗೂ ಕಾಯದೇ ಕಳೆದುಬಿಡುತ್ತವೆ...
ಮತ್ತದೇ ಪ್ರಶ್ನೆ ಮುಂದೇನು? ಎಂಬುದು....
ಕಾಲ,ಸಮಯ, ದಿನಗಳು ಒಂದೊಂದಾಗಿ ಉರುಳುತ್ತ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತೆ..ಮೊದಲು ಅದೇಗೆ ಇಲ್ಲಿರಬೇಕೋ..ಎಂದುಕೊಂಡರೂ ನಂತರದ ದಿನಗಳು ಇಲ್ಲಿಂದ ಬಿಟ್ಟು ಹೋಗಬೇಕಲ್ಲ ಎಂಬ ಬೇಸರ..
ನಮ್ಮೊಳಗೇ ಇದ್ದ ಚಿಕ್ಕಪುಟ್ಟ ಖುಷಿಗಳು, ಬೇಸರಗಳು, ಸಾಂತ್ವನದ ಮಾತುಗಳು ಖುಷಿಯನ್ನು, ಬೇಸರವನ್ನು ತಂದುಕೊಂಡುತ್ತೆ..
ಎಲ್ಲದಕ್ಕೂ ಕಾರಣ ಮನಸ್ಸೇ....ಅದೇಕೋ ಒಂದು ರೀತಿಯ ಬೇಸರ ಜಿರೆಯನ್ನು ಬಿಟ್ಟು ಹೋಗಬೇಕಲ್ಲಾ ಎಂದು...