Wednesday, February 20, 2013

ಅದೇಗೆ ಕಳೆಯಿತೋ....


ಇನ್ನು ಸ್ವಲ್ಪ ದಿನಗಳು ಮಾತ್ರ.. ಈ ಕಾಲೇಜ್ ಬಿಟ್ಟು ಹೋಗ್ತೀರಾ ಬೇಜಾರಾಗ್ತಾ ಇದ್ಯಾ ? ಅಥವಾ ಖುಷಿ ಆಗ್ತಾ ಇದೆಯಾ?
ಎಂದು ಆ ಕ್ಲಾಸಿನಲ್ಲಿ ಉಪನ್ಯಾಸಕರು ಎಲ್ಲರಲ್ಲಿಯೂ  ಕೇಳಿದಾಗ ಉತ್ತರವೇ ಬಂದಿರಲಿಲ್ಲ..ಬದಲಿಗೆ ನೆನಪುಗಳ ಲೋಕಕ್ಕೆ ಪಯಣಿಸಿದ್ದೆ....
ಮೂರು ವರುಷಗಳ ಹಿಂದಿನ ಮಾತು ಆಗ ತಾನೇ ಶಿರಸಿಯಲ್ಲಿ ಪಿ.ಯು.ಸಿ ಮುಗಿಸಿದ ನನಗೆ   ಮುಂದೆಲ್ಲಿ ಎಂಬ ಪ್ರಶ್ನೆ ಕಾಡಿತ್ತು..ಅಪ್ಪ ಹತ್ತಿರ  ಕರೆದು ಉಜಿರೆಗೆ ಹೋಗು ಎಂದಾಗ ಮುಖ ಸೊಟ್ಟಗಾಗಿತ್ತು..ಏಕೆಂದರೆ ನನ್ನಲ್ಲಿ ಉಜಿರೆ ಎಂದರೆ ಕೇವಲ ಸ್ಟ್ರಿಕ್ಟ್, ಮನೆಯಿಂದ ದೂರ ಮತ್ತು ಸೆಕೆ ಜಾಸ್ತಿ  ಎಂಬ ಭಾವನೆಯಿತ್ತು.. ಮನೆಯಲ್ಲೆಲ್ಲ ಇಡೀ ದಿನವೂ  ಅದರ ಬಗ್ಗೆಯೇ ಮೀಟಿಂಗು.."ನಿಂಗೋ ಎಷ್ಟ್ ಹೇಳಿದ್ರೂ ಅಷ್ಟೆ ನಾ ಅಂತೂ ಹೋಗ್ತ್ನಿಲ್ಲೆ"
 ಎಂಬ ನನ್ನ  ವಾದದ ಕಡೆಗೆ ಅಮ್ಮನೂ ಇದ್ದಳು..ಯಾವಾಗಲೂ ನನ್ನ ಬೇಕು ಬೇಡಗಳನ್ನು , ನನ್ನ ಆ ಸೆಗಳನ್ನು ಎಲ್ಲವನ್ನೂ ಖುಷಿಯಿಂದಲೇ ನಾ ಹೇಳಿದಂತೆಯೇ  ಕೇಳುತ್ತಿದ್ದ ಅಪ್ಪನು ಉಜಿರೆಗೆ ಹೋಗುವ ವಿಷಯದಲ್ಲಿ ಮಾತ್ರ  ಸ್ಟ್ರಿಕ್ಟ್ ಆಗಿ ಕೂತಿದ್ದ..
ಅಂತೂ ಅಣ್ಣನ ಜೊತೆಗೆ ಉಜಿರೆಯ ಕಡೆಗೆ ಪ್ರಯಾಣ ಬೆಳೆಸಿದೆ ..ಉಡುಪಿಯ ವರೆಗೆ ಮಾತ್ರ ತಲುಪಿದ್ದೆವು.. ಇನ್ನೂ ಮೂರು ತಾಸುಗಳಂತೆ ಉಜಿರೆಗೆ ಎಂದಾಗ ವಾಪಸ್ಸು ಮನೆಗೆ ಹೋಗೋಣ ಎನ್ನಲು ಶುರು ಮಾಡಿದೆ ನಾನು... ಪ್ರೀತಿಯ ಮಾತುಗಳಿಂದ ಅಣ್ಣನು ಉಜಿರೆಗೂ ತಲುಪಿಸಿದ.. ಕಾಲೇಜಿಗೆ  ತಲುಪಿದ ಕೂಡಲೇ ಸ್ಥಳದಲ್ಲಿಯೇ ಅಡ್ಮಿಷನ್ ಸಿಕ್ಕಿತ್ತು..ಅದನ್ನೂ ಮಾಡಿಸಿದ ಅಣ್ಣ..
ಮನೆಗೆ ಹಿಂತಿರುಗಿದಾಗ ಅಪ್ಪನ ಮುಖದಲ್ಲಿ ಖುಷಿಯಿತ್ತು.." ಪಾಪ ನಮ್ಮನೆ ತಂಗಿ ಹತ್ರ  ಮೊಬೈಲ್ ಇಲ್ಲೆ  ನಾ ಹೆಂಗಿದ್ದ ಬೇಕಾದ್ರೂ ತೆಗೆಸಿ ಕೊಡ್ತೆ ನನ್ನ ಬಂಗಾರ " ಎಂದೆಲ್ಲಾ ನನ್ನನ್ನು ಖುಷಿ ಪಡಿಸಲು ಪ್ರಯತ್ನಿಸಿದರೂ ನನ್ನ ಮುಖದಲ್ಲಿ ನಗೆಯು ಬಂದಿರಲಿಲ್ಲ.. ಅಮ್ಮನ ತೋಳಿನಲ್ಲಿ ಅತ್ತು ಬಿಟ್ಟಿದ್ದೆ..."ನಿಂಗೆ ಮನೆ ಬೇಜಾರ್ ಬಂದ್ರೆ ಒಂದು ಫೋನ್ ಮಾಡು ನಂಗೋ ಇಬ್ರೂ ಅಲ್ಲಿ ಒಂದು ದಿನದಲ್ಲೇ ಬತ್ಯೋ" ಎಂದಾಗ ಸ್ವಲ್ಪ ಖುಷಿಯಾಯಿತು..ಅಂತೂ ಹೊರಟೆ..
ಅಂದು ಕಾಲೇಜಿನ ಮೊದಲನೇ ದಿನ ಜೊತೆಗೆ ನನ್ನ ಜನುಮದಿನ...ಗೊತ್ತಿಲ್ಲದ ಕಾಲೇಜಿನಲ್ಲಿ ಶುಭಾಷಯ ಹೇಳುವವರು ಯಾರೂ ಇರಲಿಲ್ಲ..ಆದರೂ ಸಂಭ್ರಮವಿತ್ತು ಕೆಲವೇ ದಿನಗಳಲ್ಲಿ ಆ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಿದ್ದೆ..ಐಡಿ ಕಾರ್ಡಿನ ಮೇಲೇ ವ್ಯಾಲಿಡಿಟಿಯನ್ನು ನೋಡುತ್ತ ದೇವ್ರೇ ಇನ್ನೂ ಮೂರು ವರುಷಗಳು ಇಲ್ಲೇ ಇರ್ಬೇಕಾ! ಎಂದೆನ್ನಿಸುತ್ತದ್ದರೂ ಬಹು ಬೇಗ ಹೊಂದಿಕೊಂಡಿದ್ದೆ..
ಆಗ ನಾನು ಅದೆಷ್ಟು ಮುಗ್ಧಳಾಗಿದ್ದೆಯೆಂದರೆ ಯಲ್ಲಾಪುರದವರು ಉಜಿರೆಯಲ್ಲಿ ಯಾರಾದ್ರೂ ಇದ್ರೆ ಸಾಕು ಗೊತ್ತಿಲ್ದೇ ಇದ್ರೂ ಹೋಗಿ ಮಾತನಾಡಿಸುತ್ತಿದ್ದೆ...ನನ್ನ ರೂಂಮೇಟ್ ಇದೇ ಕಾರಣಕ್ಕೆ ಯಾವಾಗಲೂ ಹೇಳ್ತಾ ಇರ್ತಿದ್ಲು.."ಏನೇ ಯಲ್ಲಾಪುರದ್ದೇನಾದ್ರೂ ಸಂಘ ಶುರು ಮಾಡ್ತೀಯ ಹೆಂಗೆ" ಎಂದು..  ಪ್ರತೀ ರಜಾದಿನಗಳಲ್ಲಿ ಧರ್ಮಸ್ಥಳ  ಮಂಜುನಾಥನ ದರ್ಶನಕ್ಕೆ ಹೋಗುತ್ತಿದ್ದೆವು..ಕ್ಲಾಸಿನಲ್ಲಿ ಚುಕ್ಕಿ ಆಟ ಆಡುತ್ತಿದ್ದ ಸಂಭ್ರಮವಂತೂ ಹೇಳತೀರದು..
ಮೂರು ವರುಷಗಳು ಅದೇಗೆ ಕಳೆಯಿತೋ ...ಒಂದೂ ಗೊತ್ತಿಲ್ಲ ..ದಿನಗಳು ಯಾರಿಗೂ ಕಾಯದೇ ಕಳೆದುಬಿಡುತ್ತವೆ...
ಮತ್ತದೇ ಪ್ರಶ್ನೆ ಮುಂದೇನು? ಎಂಬುದು....
ಕಾಲ,ಸಮಯ, ದಿನಗಳು ಒಂದೊಂದಾಗಿ ಉರುಳುತ್ತ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತೆ..ಮೊದಲು ಅದೇಗೆ ಇಲ್ಲಿರಬೇಕೋ..ಎಂದುಕೊಂಡರೂ ನಂತರದ ದಿನಗಳು ಇಲ್ಲಿಂದ ಬಿಟ್ಟು ಹೋಗಬೇಕಲ್ಲ ಎಂಬ ಬೇಸರ..
ನಮ್ಮೊಳಗೇ ಇದ್ದ ಚಿಕ್ಕಪುಟ್ಟ ಖುಷಿಗಳು, ಬೇಸರಗಳು, ಸಾಂತ್ವನದ ಮಾತುಗಳು ಖುಷಿಯನ್ನು, ಬೇಸರವನ್ನು ತಂದುಕೊಂಡುತ್ತೆ..
ಎಲ್ಲದಕ್ಕೂ ಕಾರಣ ಮನಸ್ಸೇ....ಅದೇಕೋ ಒಂದು ರೀತಿಯ ಬೇಸರ ಜಿರೆಯನ್ನು ಬಿಟ್ಟು ಹೋಗಬೇಕಲ್ಲಾ ಎಂದು...