Tuesday, June 04, 2013
Wednesday, February 20, 2013
ಅದೇಗೆ ಕಳೆಯಿತೋ....
ಎಂದು ಆ ಕ್ಲಾಸಿನಲ್ಲಿ ಉಪನ್ಯಾಸಕರು ಎಲ್ಲರಲ್ಲಿಯೂ ಕೇಳಿದಾಗ ಉತ್ತರವೇ ಬಂದಿರಲಿಲ್ಲ..ಬದಲಿಗೆ ನೆನಪುಗಳ ಲೋಕಕ್ಕೆ ಪಯಣಿಸಿದ್ದೆ....
ಮೂರು ವರುಷಗಳ ಹಿಂದಿನ ಮಾತು ಆಗ ತಾನೇ ಶಿರಸಿಯಲ್ಲಿ ಪಿ.ಯು.ಸಿ ಮುಗಿಸಿದ ನನಗೆ ಮುಂದೆಲ್ಲಿ ಎಂಬ ಪ್ರಶ್ನೆ ಕಾಡಿತ್ತು..ಅಪ್ಪ ಹತ್ತಿರ ಕರೆದು ಉಜಿರೆಗೆ ಹೋಗು ಎಂದಾಗ ಮುಖ ಸೊಟ್ಟಗಾಗಿತ್ತು..ಏಕೆಂದರೆ ನನ್ನಲ್ಲಿ ಉಜಿರೆ ಎಂದರೆ ಕೇವಲ ಸ್ಟ್ರಿಕ್ಟ್, ಮನೆಯಿಂದ ದೂರ ಮತ್ತು ಸೆಕೆ ಜಾಸ್ತಿ ಎಂಬ ಭಾವನೆಯಿತ್ತು.. ಮನೆಯಲ್ಲೆಲ್ಲ ಇಡೀ ದಿನವೂ ಅದರ ಬಗ್ಗೆಯೇ ಮೀಟಿಂಗು.."ನಿಂಗೋ ಎಷ್ಟ್ ಹೇಳಿದ್ರೂ ಅಷ್ಟೆ ನಾ ಅಂತೂ ಹೋಗ್ತ್ನಿಲ್ಲೆ"
ಎಂಬ ನನ್ನ ವಾದದ ಕಡೆಗೆ ಅಮ್ಮನೂ ಇದ್ದಳು..ಯಾವಾಗಲೂ ನನ್ನ ಬೇಕು ಬೇಡಗಳನ್ನು , ನನ್ನ ಆ ಸೆಗಳನ್ನು ಎಲ್ಲವನ್ನೂ ಖುಷಿಯಿಂದಲೇ ನಾ ಹೇಳಿದಂತೆಯೇ ಕೇಳುತ್ತಿದ್ದ ಅಪ್ಪನು ಉಜಿರೆಗೆ ಹೋಗುವ ವಿಷಯದಲ್ಲಿ ಮಾತ್ರ ಸ್ಟ್ರಿಕ್ಟ್ ಆಗಿ ಕೂತಿದ್ದ..
ಅಂತೂ ಅಣ್ಣನ ಜೊತೆಗೆ ಉಜಿರೆಯ ಕಡೆಗೆ ಪ್ರಯಾಣ ಬೆಳೆಸಿದೆ ..ಉಡುಪಿಯ ವರೆಗೆ ಮಾತ್ರ ತಲುಪಿದ್ದೆವು.. ಇನ್ನೂ ಮೂರು ತಾಸುಗಳಂತೆ ಉಜಿರೆಗೆ ಎಂದಾಗ ವಾಪಸ್ಸು ಮನೆಗೆ ಹೋಗೋಣ ಎನ್ನಲು ಶುರು ಮಾಡಿದೆ ನಾನು... ಪ್ರೀತಿಯ ಮಾತುಗಳಿಂದ ಅಣ್ಣನು ಉಜಿರೆಗೂ ತಲುಪಿಸಿದ.. ಕಾಲೇಜಿಗೆ ತಲುಪಿದ ಕೂಡಲೇ ಸ್ಥಳದಲ್ಲಿಯೇ ಅಡ್ಮಿಷನ್ ಸಿಕ್ಕಿತ್ತು..ಅದನ್ನೂ ಮಾಡಿಸಿದ ಅಣ್ಣ..
ಮನೆಗೆ ಹಿಂತಿರುಗಿದಾಗ ಅಪ್ಪನ ಮುಖದಲ್ಲಿ ಖುಷಿಯಿತ್ತು.." ಪಾಪ ನಮ್ಮನೆ ತಂಗಿ ಹತ್ರ ಮೊಬೈಲ್ ಇಲ್ಲೆ ನಾ ಹೆಂಗಿದ್ದ ಬೇಕಾದ್ರೂ ತೆಗೆಸಿ ಕೊಡ್ತೆ ನನ್ನ ಬಂಗಾರ " ಎಂದೆಲ್ಲಾ ನನ್ನನ್ನು ಖುಷಿ ಪಡಿಸಲು ಪ್ರಯತ್ನಿಸಿದರೂ ನನ್ನ ಮುಖದಲ್ಲಿ ನಗೆಯು ಬಂದಿರಲಿಲ್ಲ.. ಅಮ್ಮನ ತೋಳಿನಲ್ಲಿ ಅತ್ತು ಬಿಟ್ಟಿದ್ದೆ..."ನಿಂಗೆ ಮನೆ ಬೇಜಾರ್ ಬಂದ್ರೆ ಒಂದು ಫೋನ್ ಮಾಡು ನಂಗೋ ಇಬ್ರೂ ಅಲ್ಲಿ ಒಂದು ದಿನದಲ್ಲೇ ಬತ್ಯೋ" ಎಂದಾಗ ಸ್ವಲ್ಪ ಖುಷಿಯಾಯಿತು..ಅಂತೂ ಹೊರಟೆ..
ಅಂದು ಕಾಲೇಜಿನ ಮೊದಲನೇ ದಿನ ಜೊತೆಗೆ ನನ್ನ ಜನುಮದಿನ...ಗೊತ್ತಿಲ್ಲದ ಕಾಲೇಜಿನಲ್ಲಿ ಶುಭಾಷಯ ಹೇಳುವವರು ಯಾರೂ ಇರಲಿಲ್ಲ..ಆದರೂ ಸಂಭ್ರಮವಿತ್ತು ಕೆಲವೇ ದಿನಗಳಲ್ಲಿ ಆ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಿದ್ದೆ..ಐಡಿ ಕಾರ್ಡಿನ ಮೇಲೇ ವ್ಯಾಲಿಡಿಟಿಯನ್ನು ನೋಡುತ್ತ ದೇವ್ರೇ ಇನ್ನೂ ಮೂರು ವರುಷಗಳು ಇಲ್ಲೇ ಇರ್ಬೇಕಾ! ಎಂದೆನ್ನಿಸುತ್ತದ್ದರೂ ಬಹು ಬೇಗ ಹೊಂದಿಕೊಂಡಿದ್ದೆ..
ಆಗ ನಾನು ಅದೆಷ್ಟು ಮುಗ್ಧಳಾಗಿದ್ದೆಯೆಂದರೆ ಯಲ್ಲಾಪುರದವರು ಉಜಿರೆಯಲ್ಲಿ ಯಾರಾದ್ರೂ ಇದ್ರೆ ಸಾಕು ಗೊತ್ತಿಲ್ದೇ ಇದ್ರೂ ಹೋಗಿ ಮಾತನಾಡಿಸುತ್ತಿದ್ದೆ...ನನ್ನ ರೂಂಮೇಟ್ ಇದೇ ಕಾರಣಕ್ಕೆ ಯಾವಾಗಲೂ ಹೇಳ್ತಾ ಇರ್ತಿದ್ಲು.."ಏನೇ ಯಲ್ಲಾಪುರದ್ದೇನಾದ್ರೂ ಸಂಘ ಶುರು ಮಾಡ್ತೀಯ ಹೆಂಗೆ" ಎಂದು.. ಪ್ರತೀ ರಜಾದಿನಗಳಲ್ಲಿ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೋಗುತ್ತಿದ್ದೆವು..ಕ್ಲಾಸಿನಲ್ಲಿ ಚುಕ್ಕಿ ಆಟ ಆಡುತ್ತಿದ್ದ ಸಂಭ್ರಮವಂತೂ ಹೇಳತೀರದು..
ಮೂರು ವರುಷಗಳು ಅದೇಗೆ ಕಳೆಯಿತೋ ...ಒಂದೂ ಗೊತ್ತಿಲ್ಲ ..ದಿನಗಳು ಯಾರಿಗೂ ಕಾಯದೇ ಕಳೆದುಬಿಡುತ್ತವೆ...
ಮತ್ತದೇ ಪ್ರಶ್ನೆ ಮುಂದೇನು? ಎಂಬುದು....
ಕಾಲ,ಸಮಯ, ದಿನಗಳು ಒಂದೊಂದಾಗಿ ಉರುಳುತ್ತ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತೆ..ಮೊದಲು ಅದೇಗೆ ಇಲ್ಲಿರಬೇಕೋ..ಎಂದುಕೊಂಡರೂ ನಂತರದ ದಿನಗಳು ಇಲ್ಲಿಂದ ಬಿಟ್ಟು ಹೋಗಬೇಕಲ್ಲ ಎಂಬ ಬೇಸರ..
ನಮ್ಮೊಳಗೇ ಇದ್ದ ಚಿಕ್ಕಪುಟ್ಟ ಖುಷಿಗಳು, ಬೇಸರಗಳು, ಸಾಂತ್ವನದ ಮಾತುಗಳು ಖುಷಿಯನ್ನು, ಬೇಸರವನ್ನು ತಂದುಕೊಂಡುತ್ತೆ..
ಎಲ್ಲದಕ್ಕೂ ಕಾರಣ ಮನಸ್ಸೇ....ಅದೇಕೋ ಒಂದು ರೀತಿಯ ಬೇಸರ ಉಜಿರೆಯನ್ನು ಬಿಟ್ಟು ಹೋಗಬೇಕಲ್ಲಾ ಎಂದು...
Monday, December 17, 2012
ಬದುಕಿನ ಬದುಕು ನೀ..........
ನನ್ನೊಲವ ದಾರಿಯಲಿ ಬರಬೇಕೆನ್ನುವ
ಪ್ರೀತಿಯ ಹೆಜ್ಜೆಗಳಲಿ
ನೀನೆಂದು ಬಂದು ಸಾಗುವೆ
ಕಣ್ಣಿನಲಿ ಕಣ್ಣಂತೆ ಕಾಯುತಿರುವ
ಮನಸು ಕನಸುಗಳ
ಪಿಸುಮಾತುಗಳು.....
ನನ್ನ ಮನವು ಇಂದಿಗೂ ಎಂದಿಗೂ
ಹೇಳುತಿದೆ ಕನಸುಗಳು
ನನಸಾಗುವಂತಿದ್ದರೆ
ನಿನ್ನ ಜೊತೆಗೇ ಎಷ್ಟು ಸುಂದರವೆಂದು,
ನೀ ಕಟ್ಟುವ ಪ್ರೀತಿ ಸೌಧದಲಿ
ನನಗೆ ಜಾಗವಿದೆಯೆಂದರೆ
ಕಟ್ಟೋಣ ಬದುಕನ್ನೂ....
ಕಣ್ಣಿನ ಕ್ಯಾಮರಾದಲಿ ತೆಗೆದ
ಫೋಟೋವನ್ನು ಹೃದಯದಲಿ
ಕಟ್ಟಿಸಿಡಲೇ ..
ನೀ ಹಣತೆ ಹಚ್ಚುವೆಯಾದರೆ
ಅದರ ಬೆಳಕು ನಾನುಗುವೆ ನಿನಗೆ
ದಾರಿಯುದ್ದಕ್ಕೂ ಎಂದಿಗೂ
ಕೊನೆಯವರೆಗೂ ...
ಖಾಲಿಯಾಗದ ಒಂದಷ್ಟು ಭಾವನೆಗಳ
ಲೋಕದಲಿ
ನಾನು ನೀನು ಮಾತ್ರ..
ಬದುಕಿನಲ್ಲಿಯ ಬದುಕು ನೀನು.
Tuesday, December 11, 2012
ಪರಿಹಾರವಿಲ್ಲವೇ??
ಹಗಲು ಅಮವಾಸ್ಯೆ ಕವಿದ
ಬದುಕಿನ ಆಗಸದಲಿ
ಒಂದುಹೊತ್ತಿನ ಅನ್ನಕ್ಕಾಗಿ ಪರದಾಡುವ ,
ಯಾರದ್ದೋ ಮನೆಯ ಪಾತ್ರೆ ತೊಳೆದು
ದುಡಿಯುವಳು ಆಕೆ ತನ್ನವರಿಗಾಗಿ
ಒಂದೆಡೆ ಭೃಷ್ಟಾಚಾರದ ನಾಟ್ಯವಾದರೆ
ಇನ್ನೊಂದೆಡೆ ಬಡತನದ ಬೇಗೆ
ರೋಗ ರುಜಿನಗಳ ಕೊರತೆ
ಎಂದೂ ವಾಸಿಯಾಗದ ಗಾಯದ ಕಲೆಗಳು
ಹಸಿವಿನಿಂದ ಬಳಲಿದ ಜೀವಕೆ
ವಿಟಮಿನ್ ಕೊರತೆಯೆಂದರು ವೈದ್ಯರು,
ಕುಡಿತಕ್ಕಾಗಿ ಹಣ ಬೇಕೆಂದು
ಹೊಡೆಯುವ ಗಂಡ ಒಂದೆಡೆಯಾದರೆ
ಚಾಕಲೇಟ್ ಕೊಡಿಸಮ್ಮ ಎಂದು ಅಳುವ ಕಂದಮ್ಮಗಳು
ಏನಾದರೂ ಸಹಾಯ ಮಾಡಿ ಎಂದು ಬೇಡಿದರೆ
ನೋಡಿ ನಗುವವರು ಬಿಟ್ಟರೆ
ಕೇಳುವವರು ಯಾರು??
ಅಪರೂಪದ ಖಾಯಿಲೆಗೆ
ಬೆಟ್ಟದ ಸೊಪ್ಪೇ ಔಷಧ
ಸಂಕವಿಲ್ಲದ ಹಳ್ಳವ ದಾಟಿ ಹೋಗಬೇಕು
ಚಪ್ಪಲಿಗಳಿಲ್ಲದ ಕಾಲಿಗೆ ಮುಳ್ಳು ಚುಚ್ಚಿದರೆ ಕೇಳುವವರಿಲ್ಲ
ಜೋರು ಮಳೆ ಬಂದರೆ ಹಾರಿ ಹೋಗುವ ಮನೆ
ಪ್ರತೀ ಕ್ಷಣವೂ ಬಡತನದ ಚಿಂತೆ
ಹೇಗೆ ದುಡಿಯಲಿ ಎಂದು ಚಿಂತಿಸುವುದರೊಳಗೆ ಮಾನಸಿಕ ಕಿರುಕುಳ
ಅವಳಿಗೂ ಮನಸು, ಕನಸು ಎಲ್ಲವೂ ಇದ್ದು
ಅರ್ಥ ಮಾಡಿಕೊಂಡ ಹೃದಯವಿಲ್ಲ
ಅಡಗಿರುವ ಅವ್ಯಕ್ತ ಭಾವನೆಗಳಿಗೆ
ಉತ್ತರವೆಂದೂ ಸಿಗಬಹುದೇ?
ಅಮವಾಸ್ಯೆ ಕಳೆದು ಒಂದು ಚೂರಾದರೂ ಬೆಳಕು
ಹರಿದರೆ ಎಂಬ ಆಶಯ
ಎಂದು ಸಿಗಬಹುದು ಪ್ರಪಂಚದಲ್ಲಿರುವ ಬಡವರಿಗೆ
ಪರಿಹಾರ??
ಮಕ್ಕಳಿಗೆ ಸರಿಯಾದ ಉಪಹಾರ?
ಹತಾಶೆ ನೋವು ಬದುಕು ಒಡ್ಡಿದ ಪರೀಕ್ಷೆಗೆ
ಎಂದೂ ಕಾಯುತ್ತಿರಬೇಕೆ?
Friday, November 30, 2012
ಖುಷಿಯ ಗಂಟನ್ನು ಇರಿಸಿದ್ದವು
ಮೂಡಣದಿ ಸೂರ್ಯನ ನಸುಗೆಂಪು
ಕೆನ್ನೆಯ ಆಗಸವು
ನಾಚುತ್ತಾ ಸ್ವಾಗತಿಸುತಿತ್ತು
ಪ್ರೀತಿಯಲಿ ನೇಸರನ ತುಸು ಬೆಳಕು
ಅಂಬರವ ಹೊಳೆಯುವಂತೆ ಮಾಡಿತ್ತು
ಹಕ್ಕಿಗಳೂ ಜೊತೆ ಸೇರಿ ಹಾಡುತ್ತಾ
ಸಂಗೀತವ ಆಲಿಸುವಂತೆ ಮಾಡಿದ್ದವು
ಭಾವನೆಗಳ ಲೋಕದಲಿ
ಪಯಣಿಸುತ್ತಿದ್ದ ನಾ....
ಮರೆತಿದ್ದೆ ನನ್ನನ್ನೇ!!
ತಂಗಾಳಿಯ ಹಿತ ಸ್ಪರ್ಶವು
ಒಂದಷ್ಟು ಕನಸುಗಳನು
ಹೊತ್ತು ತಂದಿದ್ದವು,
ಇಬ್ಬನಿಯು ಮುತ್ತಿನಂತೇ
ಹೊಳೆಯುತ್ತಾ
ಖುಷಿಯ ಗಂಟನ್ನು ನನ್ನಲ್ಲಿ
ಇರಿಸಿದ್ದವು,
ಒಂಟಿತನವೆಲ್ಲಾ ಮರೆತು
ನಿಸರ್ಗದ ಸಹಜ ಸುಂದರತೆಗೆ
ನನ್ನೀ ಹೃದಯವು ಸೇರಿ ಹೋಗಿತ್ತು..
Monday, November 05, 2012
ಅಂತರಂಗದ ಕನಸುಗಳು
ಮನದ ಗೋಡೆಯೊಳಗೆ ಕಟ್ಟಿಟ್ಟ
ಕನಸು
ಅಂತರಂಗದ ಮಾತುಗಳಿಗೆ
ಹಾಡು ಬರೆಯಲು
ಹೊರಟಾಗ ಪ್ರೀತಿಯ ಬಗೆಗೆ
ಬರೆದುಬಿಡುತ್ತೆ ಅರಿವಿಲ್ಲದೆಯೇ
ಭಾವನೆಗಳ ಸಂಗಮದಲ್ಲಿ
ಒಲವೆಂಬ ನಂಟು ಬೇಕೆನಿಸಿ
ನನ್ನ ಹೃದಯದೊಳಗೇ ಹೇಳಲಾರದ
ವರ್ಣಿಸಲಾಗದ
ಒಂದಷ್ಟು ಕನಸಿನ ಮೂಟೆಗಳು
ಬಂದ ಹಾಗೆ ಬದುಕನ್ನು ಸ್ವೀಕರಿಸುವುದಕ್ಕಿಂತ
ಬೇಕಾದ ಹಾಗೆ ರೂಪಿಸಿಕೊಳ್ಳುವ
ನನ್ನ ಬದುಕಿನ ಶಿಲ್ಪಿಯು ನಾನಾಗಬೇಕೆಂದು..
Tuesday, October 23, 2012
ನಿದ್ರೆಯನ್ನು ಹುಡುಕಿದೆ........
ಪರೀಕ್ಷೆಯೇನೋ ಮುಗೀತು ..ಸರಿಯಾಗಿ ನಿದ್ರೆ ಮಾಡ್ದೇ ಎಷ್ಟೋಂದು ದಿನ ಆಯ್ತು.. ನಿನ್ನೆ ಪರೀಕ್ಷೆ ಮುಗಿದ ಸಂಭ್ರಮದಲ್ಲಿ ಬೇಗ ನಿದ್ರಿಸಬೇಕೆಂದು ಮಲಗಿದರೆ ನಿದ್ರೆಯೇ ಬರುತ್ತಿಲ್ಲ.
. ಹದಿನೈದು ದಿನಗಳಿಂದ ಪರೀಕ್ಷೆಗೆ ತಡರಾತ್ರಿಯವರೆಗೆ ಕೂತು, ಬೆಳಿಗ್ಗೆ ಬೇಗ ಏಳುವುದೆಂದರೆ ಕಬ್ಬಿಣದ ಕಡಲೆಯಂತಾಗುತ್ತಿತ್ತು.. ಓದುತ್ತಾ ಓದುತ್ತಾ ನಿದ್ರಾದೇವಿಯು ಸೆಳೆದು ಕೊಳ್ಳುತ್ತಿತ್ತು..ಬೆಳಿಗ್ಗೆಯಂತೂ ಬಿಡಿ..ಪುಸ್ತಕ ನೋಡಿದರೆ ಸಾಕು ಕಣ್ಣುಗಳು ತನ್ನಿಂದ ತಾನೇ ಮುಚ್ಚುತ್ತಿತ್ತು..ಅಮ್ಮನ ಹತ್ತಿರ ಪ್ರತೀ ದಿನ ಬೆಳಿಗ್ಗೆ ಫೋನ್ ಮಾಡಿ ಸ್ವಲ್ಪ ಮಾತಾಡಿ ಎಬ್ಬಿಸು ಆಗ ಸರಿಯಾಗಿ ಎಚ್ಚರವಾಗುತ್ತೆ ಎಂದರೆ ಎರಡು ದಿನ ಮಾತ್ರರ..ಮೂರನೇಯ ದಿನದಿಂದ ಬೆಳಿಗ್ಗೆ ಫೋನ್ ರಿಂಗ್ ಆದ್ರೆ ಸಾಕು ಸ್ವಿಚ್ ಆಫ್ ಮಾಡಿ ಮತ್ತೆ ಮಲಗುವುದು.. ಅಲಾರಾಂ ಅಂತೂ ಎಷ್ಟು ಶಾಪವನ್ನು ತೆಗೆದುಕೊಂಡಿದೆಯೋ ಗೊತ್ತಿಲ್ಲ.. ನಾವು ಮೂವರೂ ಅಲಾರಾಂ ಇಟ್ಕೊಂಡು ಮಲಗ್ತಿದ್ವಿ.. ಮಲಗಿ ಸ್ವಲ್ಪ ಹೊತ್ತು ಆಯಿತೇನೋ ಎಂದಾಗ ಒಬ್ಬೊಬ್ಬರ ಅಲಾರಾಂ ಒಂದೊಂದು ತರಹ ಕೂಗಲು ಶುರು ಮಾಡ್ತಿತ್ತು..ಬಾಯಿಗೆ ಬಂದ ಎಷ್ಟೋ ಕವನಗಳು ಪರೀಕ್ಷೆಯ ದೃಷ್ಟಿಯಿಂದ ಮರೆಯಾಗುವಂತೆ ಮಾಡುತ್ತಿದ್ದೆ..
ಇನ್ನು ನನ್ನ ಒಬ್ಬಳು ರೂಂ ಮೇಟ್ ಪುಸ್ತಕ ಹಿಡಿದುಕೊಂಡೇ ಮಲಗುತ್ತಿದ್ದಳಾದರೂ, ಏ ನಿದ್ರೆ ಮಾಡ್ಬೇಡ ಹೇಳಿದಾಕ್ಷಣ ನಾ ಓದ್ತಾ ಇದೀನಿ ನಿದ್ರೆ ಮಾಡಿಯೇ ಇಲ್ಲ ಎಂದು ಸಾಧಿಸುತ್ತಿದ್ದಳು. .ನಾನು ರಾತ್ರಿ ಬೇಗ ಮಲಗಿ ಬೇಗ ಏಳಬೇಕೆಂದುಕೊಂಡರೆ ಬೇಗ ಏನೋ ಮಲಗುತ್ತಿದ್ದೆನಾದರೂ ಏಳುವುದು ಸ್ವಲ್ಪ ಲೇಟಾಗಿಯೇ ಆಗುತ್ತಿತ್ತು.
ಸ್ಟಡೀ ಹಾಲೀಡೇಸ್ ಲಿ ಕನಸುಗಳೂ ಬೀಳೋದು ಜಾಸ್ತಿ.. ಎದ್ದ ತಕ್ಷಣ ಇವತ್ತು ನನ್ನ ಕನಸಿನಲ್ಲಿ ನೀನು ಬಂದಿದ್ದೆ ಎಂದು ಹೇಳುವುದರೊಳಗೇ ಬೆಳಕಾಗುತ್ತಿದ್ದವು.. ಪ್ರತೀ ದಿನವೂ ಒಬ್ಬರಿಗಲ್ಲ ಒಬ್ಬರಿಗೆ ಕನಸು..ಪರೀಕ್ಷೆಯಲ್ಲಿ ಡಿಬಾರ್ ಆದಂತೆ ಒಂದು ಕನಸು ಬಿದ್ರೆ, ಹಾಲ್ ಟಿಕೇಟ್ ಕಾಣೆಯಾದಂತೆ ಇನ್ನೊಂದು ಕನಸು..ಇನ್ನು ಫೇಸ್ಬುಕ್, ಬ್ಲಾಗ್ ಇಂದ ಸ್ವಲ್ಪ ದೂರವಿರೋಣ ಎಂದರೆ ಹಾಳೆಯಲ್ಲಿ ಬರೆದಿಟ್ಟ ಕವನವು ಬಾ ಎಂದು ಕರೆಯುತ್ತಿತ್ತು..
ಪರೀಕ್ಷೆ ಶುರುವಾಗಿ ಎಷ್ಟೊಂದು ದಿನ ಆಗಿತ್ತು ಅಬ್ಬ ಮುಗೀತಲ್ಲ..ಎಂದು ಖುಷಿ ಖುಷಿಯಲ್ಲಿದ್ದರೂ ನಾಳೆಯಿಂದ ಪರೀಕ್ಷೆಯನ್ನು ತುಂಬಾ ಮಿಸ್ ಮಾಡ್ಕೊಳ್ತೀವಿ ಎಂದೆಲ್ಲ ಅನಿಸಲು ಶುರುವಾಗಿತ್ತು.. ಲಾಸ್ಟ್ ಎಕ್ಸಾಂ ಸೈಕಾಲಜಿ ಆಗಿದ್ದರಿಂದ ಬೇಗ ಬರೆದು ಪೇಪರ್ ಕೊಟ್ಟು ಬಂದರೆ ಸಾಕು ಎನ್ನುವಂತಾಗಿತ್ತು..
ನಿನ್ನೆ ಮನವೆಲ್ಲಾ ಊರಿನ ಕಡೆಗೆ ಹೋಗುವ ದಿನವನ್ನು, ಅಣ್ಣನ ಮಗನನ್ನು ಎತ್ತಿ ಲಾಲಿ ಹಾಡುವ ಸಮಯವನ್ನು , ಅಮ್ಮನನ್ನು ನೋಡಿ ತಬ್ಬಿಕೊಳ್ಳುವ ಆಸೆಯನ್ನು , ಅತ್ತಿಗೆ ಹತ್ತಿರ ಕಾಲೇಜಿನ ಸುದ್ದಿಗಳನ್ನೆಲ್ಲಾ ಹೇಳುವ ತವಕವನ್ನು, ಅಣ್ಣ ಹತ್ತಿರ, ಅಪ್ಪನ ಹತ್ತಿರ ಹೇಳುವ ಜೋಕುಗಳನ್ನು ಲೆಕ್ಕ ಹಾಕುತ್ತಿದ್ದ ನನಗೆ ಪರೀಕ್ಷೆ ಮುಗಿದರೂ ರಾತ್ರಿ ನಿದ್ರೆಯೇ ಬರಲಿಲ್ಲ...ಪರೀಕ್ಷೆಯ ದಿನ ಬೇಡವೆಂದರೂ ಬರುತ್ತಿದ್ದ ನಿದ್ರೆಯು ಈಗ ಎಲ್ಲಿ ಸರಿದು ಹೋಯಿತೋ..?
Friday, October 19, 2012
Monday, September 17, 2012
ಹಬ್ಬಕ್ಕೂ ಊರಿಗೂ.....
ಹಬ್ಬವೆಂದರೇ ಹಾಗೇ ಪ್ರತೀ ಹಬ್ಬಕ್ಕೂ ಊರಲ್ಲಿರಬೇಕೆನ್ನುವ ಆಸೆ....
ಇನ್ನೂ ತಿಂಗಳು ಇರುವಾಗಲೇ ಕ್ಯಾಲೆಂಡರ್ ತಿರುವಿ ಹಾಕಿ
ದಿನ ಎಣಿಸಲು ಶುರು ಮಾಡಲಾರಂಭಿಸುವುದು...
ಈ ಹಾಸ್ಟೇಲಿನ ಟೈಂ ಟು ಟೈಂ ದಿನಚರಿಗಳು, ಒಂದಷ್ಟು ಸ್ಟ್ರಿಕ್ಟ್ ನೆಸ್
ಸಾಕಾಗಿಹೋಗಿರುತ್ತದೆ..ಅತೀ ಭಾವದ ಮನಸು ಊರನ್ನು ನೋಡುವ
ಕನಸಿನಲಿ ಮುಳುಗಿ ಹೋಗಿರುತ್ತೆ..ಅಮ್ಮನ ಹತ್ತಿರ ಹೇಳುವ ಸುದ್ದಿಗಳು
ಒಂದಷ್ಟು ಪೆಂಡಿಂಗ್ ನಲ್ಲಿರುತ್ತೆ..ದಿನಾ ಕಾಲೇಜು ಹಾಸ್ಟೇಲು ಎಂದು
ಇರುವವರಿಗೆ ಊರಿಗೆ ಹೋಗುವುದು ಅದರಲ್ಲೂ ಹಬ್ಬಕ್ಕೆ ಹೋಗುವುದೆಂದರೆ
ಎಲ್ಲಿಲ್ಲದ ಸಂಭ್ರಮ..ಆದರೆ ಈ ಹಬ್ಬಕ್ಕೆ ಪರೀಕ್ಷೆಗೆ ಅದೇನು ನಂಟೋ
ತಿಳಿಯದು..ಜ್ಯೋತಿಷ್ಯಿಗಳ ಹತ್ತಿರ ದಿನ ನೋಡಿ ಇಟ್ಟಂತೆ ಪ್ರತೀ ಭಾರಿಯೂ
ಹಬ್ಬಕ್ಕೆ ಹೋಗುವ ಕನಸಿಗೆ ಈ ಪರೀಕ್ಷೆಯು ಅಡೆತಡೆ..ಒಂದಷ್ಟು ಬೈಗುಳ
ರೇಗಾಟ ಎಲ್ಲವೂ ಇದ್ದರೂ ಏನೂ ಮಾಡಲಾಗದ ಮಾತು.. ಈ ಪರೀಕ್ಷೆ ಕಂಡು
ಹಿಡಿದ ಮಹಾತ್ಮರು ಯಾರಪ್ಪಾ ಎಂದು ಅನಿಸುವುದುಂಟು.. ಮನಸ್ಸೆಲ್ಲವೂ
ಊರಲ್ಲಿಯೇ ಇರುತ್ತೆ.. ಯಾವಾಗಲೂ ಅಷ್ಟೆ ..ಅಂದುಕೊಂಡಿದ್ದೆಲ್ಲಾ
ಆಗಬೇಕಲ್ಲ.. ಹಬ್ಬಕ್ಕೆ ಮನೆಯವರೆಲ್ಲಾ ಸೇರುತ್ತೇವಲ್ಲಾ ಎನ್ನುವ ಖುಷಿ
ಒಂದೆಡೆಯಾದರೆ , ದೂರದ ಊರಿನಲ್ಲಿ ನೌಕರಿ ಮಾಡುತ್ತಿರುವ
ಕುಟುಂದವರೆಲ್ಲರೂ ಸಿಗುತ್ತಾರೆಂಬ ಖುಷಿ..ಈ ಖುಷಿಯೆಲ್ಲವೂ ಏನೇ ಇದ್ದರೂ
ಊರಿಗೆ ಹೋಗುವುದಾದರೆ ಮಾತ್ರ..ಬಸ್, ಟ್ರೇನ್ ಎಲ್ಲವೂ ಎಷ್ಟೇ ರಶ್
ಇದ್ದರೂ ಹೋಗಿಯೇಬಿಡಬೇಕೆನ್ನುವ ಹಠ...
ಅದೇನೇ ಇರಲಿ ಈ ಬಾರಿ ಅಧಿಕಮಾಸ ಬಂದಿದ್ದರಿಂದ
ಪ್ರತೀ ಬಾರಿಯ ಹಬ್ಬದ ದಿನಗಳಿಗಿಂತ ಮುಂದೆ ಇರುವುದರಿಂದ
ಪರೀಕ್ಷೆಯಿಂದ ಹಬ್ಬ ತಪ್ಪಿಸಿಕೊಂಡಿತು..ಈ ಬಾರಿಯ ಹಬ್ಬಕ್ಕೆ ಊರಲ್ಲಿಯೇ
ಇರುವುದೇ ಖುಷಿ..
Tuesday, August 14, 2012
ಭಾವನೆ
ನನ್ನ ಉಸಿರನಲೂ ನಿನ್ನ ಭಾವನೆಗಳೇ ಹರಿಯುತ್ತ
ನಾನು ಬದುಕುವ ಉಸಿರೇ ನೀನಲ್ಲವೇ
ಭಾವಜೀವಿ ನಾನಾದರೆ ಅದರ ಭಾವನೆ ನಿನ್ನದಲ್ಲವೇ
ಭಾವನೆಗೆ ರೂಪ ಬೇಕೆ, ಬಣ್ಣ ಬೇಕೆ?
ನಮ್ಮಿಬ್ಬರಲೂ ಅರ್ಥ ಮಾಡಿಕೊಳ್ಳುವ ಮನಸ್ಸೊಂದಿದ್ದರೆ
ನಿನ್ನ ಹೃದಯದಲಿ ಎಂದೂ
ಗುನುಗುನಿಸುವ ಹಾಡು ನನ್ನದೇ
ನನ್ನ ಮನವು ಯೋಚಿಸುವ ಪ್ರತೀ ಕ್ಷಣವೂ ನೀನೇ
ನನ್ನ ಬಗೆಗಿನ ನಿನ್ನ ಭಾವನೆಯಲ್ಲಿಯೇ ಬದುಕು ಕಟ್ಟುವವಳು
ನಾನುಕಂಡ ಕನಸುಗಳೆಷ್ಟೋ ,
ನನಸಾಗುವುದೆಷ್ಟೋಯಾವುದೂ ತಿಳೀದಿ
ಲ್ಲನಿನ್ನ ಬಗೆಗಿರುವ ಭರವಸೆಯೊಂದೇ
ನನ್ನ ಬದುಕಿಗೊಂದು ಸ್ಪೂರ್ತಿಯೆಂದರೆ
Subscribe to:
Posts (Atom)

