Tuesday, December 11, 2012

ಪರಿಹಾರವಿಲ್ಲವೇ??

ಹಗಲು ಅಮವಾಸ್ಯೆ ಕವಿದ
ಬದುಕಿನ ಆಗಸದಲಿ
ಒಂದುಹೊತ್ತಿನ ಅನ್ನಕ್ಕಾಗಿ ಪರದಾಡುವ ,
ಯಾರದ್ದೋ ಮನೆಯ ಪಾತ್ರೆ ತೊಳೆದು
ದುಡಿಯುವಳು ಆಕೆ ತನ್ನವರಿಗಾಗಿ
ಒಂದೆಡೆ ಭೃಷ್ಟಾಚಾರದ ನಾಟ್ಯವಾದರೆ
ಇನ್ನೊಂದೆಡೆ ಬಡತನದ ಬೇಗೆ
ರೋಗ ರುಜಿನಗಳ ಕೊರತೆ
ಎಂದೂ ವಾಸಿಯಾಗದ ಗಾಯದ ಕಲೆಗಳು
ಹಸಿವಿನಿಂದ ಬಳಲಿದ ಜೀವಕೆ
ವಿಟಮಿನ್ ಕೊರತೆಯೆಂದರು ವೈದ್ಯರು,
ಕುಡಿತಕ್ಕಾಗಿ ಹಣ ಬೇಕೆಂದು
ಹೊಡೆಯುವ ಗಂಡ ಒಂದೆಡೆಯಾದರೆ
ಚಾಕಲೇಟ್ ಕೊಡಿಸಮ್ಮ  ಎಂದು ಅಳುವ ಕಂದಮ್ಮಗಳು
ಏನಾದರೂ ಸಹಾಯ ಮಾಡಿ ಎಂದು ಬೇಡಿದರೆ
ನೋಡಿ ನಗುವವರು ಬಿಟ್ಟರೆ
ಕೇಳುವವರು ಯಾರು??
ಅಪರೂಪದ ಖಾಯಿಲೆಗೆ
ಬೆಟ್ಟದ ಸೊಪ್ಪೇ ಔಷಧ
ಸಂಕವಿಲ್ಲದ ಹಳ್ಳವ ದಾಟಿ ಹೋಗಬೇಕು
ಚಪ್ಪಲಿಗಳಿಲ್ಲದ ಕಾಲಿಗೆ ಮುಳ್ಳು ಚುಚ್ಚಿದರೆ ಕೇಳುವವರಿಲ್ಲ
ಜೋರು ಮಳೆ ಬಂದರೆ ಹಾರಿ ಹೋಗುವ ಮನೆ
ಪ್ರತೀ ಕ್ಷಣವೂ ಬಡತನದ ಚಿಂತೆ
 ಹೇಗೆ ದುಡಿಯಲಿ ಎಂದು ಚಿಂತಿಸುವುದರೊಳಗೆ ಮಾನಸಿಕ ಕಿರುಕುಳ
ಅವಳಿಗೂ ಮನಸು, ಕನಸು ಎಲ್ಲವೂ ಇದ್ದು
ಅರ್ಥ ಮಾಡಿಕೊಂಡ ಹೃದಯವಿಲ್ಲ
ಅಡಗಿರುವ ಅವ್ಯಕ್ತ ಭಾವನೆಗಳಿಗೆ
ಉತ್ತರವೆಂದೂ ಸಿಗಬಹುದೇ?
ಅಮವಾಸ್ಯೆ ಕಳೆದು ಒಂದು ಚೂರಾದರೂ ಬೆಳಕು
ಹರಿದರೆ ಎಂಬ ಆಶಯ
ಎಂದು ಸಿಗಬಹುದು ಪ್ರಪಂಚದಲ್ಲಿರುವ  ಬಡವರಿಗೆ
ಪರಿಹಾರ??
ಮಕ್ಕಳಿಗೆ ಸರಿಯಾದ ಉಪಹಾರ?
ಹತಾಶೆ ನೋವು ಬದುಕು ಒಡ್ಡಿದ ಪರೀಕ್ಷೆಗೆ
ಎಂದೂ ಕಾಯುತ್ತಿರಬೇಕೆ?







1 comment:

  1. ಬದುಕೇ ಹಾಗೆ, ಒಮ್ಮೊಮ್ಮೆ ಸಂಕವಿಲ್ಲದ ಹಳ್ಳ ಹಾಯುವ ಪರೀಕ್ಷೆಯೊಡ್ದುತ್ತದೆ ; ಕೊನೆಗೆ ಸಂಕ ತೋರಿಸುತ್ತದೆ ಕೂಡ .

    ಕವಿತೆ ಇಷ್ಟವಾಯಿತು...

    ReplyDelete