Friday, November 30, 2012

ಖುಷಿಯ ಗಂಟನ್ನು ಇರಿಸಿದ್ದವು

ಮೂಡಣದಿ ಸೂರ್ಯನ ನಸುಗೆಂಪು
ಕೆನ್ನೆಯ ಆಗಸವು
ನಾಚುತ್ತಾ ಸ್ವಾಗತಿಸುತಿತ್ತು
ಪ್ರೀತಿಯಲಿ ನೇಸರನ ತುಸು ಬೆಳಕು
ಅಂಬರವ ಹೊಳೆಯುವಂತೆ ಮಾಡಿತ್ತು
ಹಕ್ಕಿಗಳೂ ಜೊತೆ ಸೇರಿ ಹಾಡುತ್ತಾ
ಸಂಗೀತವ ಆಲಿಸುವಂತೆ ಮಾಡಿದ್ದವು
ಭಾವನೆಗಳ ಲೋಕದಲಿ
ಪಯಣಿಸುತ್ತಿದ್ದ ನಾ....ಮರೆತಿದ್ದೆ ನನ್ನನ್ನೇ!!
ತಂಗಾಳಿಯ ಹಿತ ಸ್ಪರ್ಶವು
ಒಂದಷ್ಟು  ಕನಸುಗಳನು
ಹೊತ್ತು ತಂದಿದ್ದವು,
ಇಬ್ಬನಿಯು ಮುತ್ತಿನಂತೇ
ಹೊಳೆಯುತ್ತಾ
ಖುಷಿಯ ಗಂಟನ್ನು ನನ್ನಲ್ಲಿ
ಇರಿಸಿದ್ದವು,
ಒಂಟಿತನವೆಲ್ಲಾ ಮರೆತು
ನಿಸರ್ಗದ ಸಹಜ ಸುಂದರತೆಗೆ
ನನ್ನೀ ಹೃದಯವು ಸೇರಿ ಹೋಗಿತ್ತು..





Monday, November 05, 2012

ಅಂತರಂಗದ ಕನಸುಗಳು


ಮನದ ಗೋಡೆಯೊಳಗೆ ಕಟ್ಟಿಟ್ಟ

ಕನಸು

ಅಂತರಂಗದ ಮಾತುಗಳಿಗೆ 

ಹಾಡು ಬರೆಯಲು

ಹೊರಟಾಗ ಪ್ರೀತಿಯ ಬಗೆಗೆ 

ಬರೆದುಬಿಡುತ್ತೆ ಅರಿವಿಲ್ಲದೆಯೇ

ಭಾವನೆಗಳ ಸಂಗಮದಲ್ಲಿ 

ಒಲವೆಂಬ ನಂಟು ಬೇಕೆನಿಸಿ

 ನನ್ನ ಹೃದಯದೊಳಗೇ ಹೇಳಲಾರದ 

ವರ್ಣಿಸಲಾಗದ  

ಒಂದಷ್ಟು ಕನಸಿನ ಮೂಟೆಗಳು

ಬಂದ ಹಾಗೆ ಬದುಕನ್ನು ಸ್ವೀಕರಿಸುವುದಕ್ಕಿಂತ

ಬೇಕಾದ ಹಾಗೆ ರೂಪಿಸಿಕೊಳ್ಳುವ 

ನನ್ನ ಬದುಕಿನ ಶಿಲ್ಪಿಯು ನಾನಾಗಬೇಕೆಂದು..

 

 

Tuesday, October 23, 2012

ನಿದ್ರೆಯನ್ನು ಹುಡುಕಿದೆ........

ಪರೀಕ್ಷೆಯೇನೋ ಮುಗೀತು ..ಸರಿಯಾಗಿ ನಿದ್ರೆ ಮಾಡ್ದೇ ಎಷ್ಟೋಂದು ದಿನ ಆಯ್ತು.. ನಿನ್ನೆ ಪರೀಕ್ಷೆ ಮುಗಿದ ಸಂಭ್ರಮದಲ್ಲಿ ಬೇಗ ನಿದ್ರಿಸಬೇಕೆಂದು ಮಲಗಿದರೆ ನಿದ್ರೆಯೇ ಬರುತ್ತಿಲ್ಲ.

. ಹದಿನೈದು ದಿನಗಳಿಂದ ಪರೀಕ್ಷೆಗೆ ತಡರಾತ್ರಿಯವರೆಗೆ ಕೂತು, ಬೆಳಿಗ್ಗೆ ಬೇಗ ಏಳುವುದೆಂದರೆ ಕಬ್ಬಿಣದ ಕಡಲೆಯಂತಾಗುತ್ತಿತ್ತು.. ಓದುತ್ತಾ ಓದುತ್ತಾ ನಿದ್ರಾದೇವಿಯು ಸೆಳೆದು ಕೊಳ್ಳುತ್ತಿತ್ತು..ಬೆಳಿಗ್ಗೆಯಂತೂ ಬಿಡಿ..ಪುಸ್ತಕ ನೋಡಿದರೆ ಸಾಕು ಕಣ್ಣುಗಳು ತನ್ನಿಂದ ತಾನೇ ಮುಚ್ಚುತ್ತಿತ್ತು..ಅಮ್ಮನ ಹತ್ತಿರ ಪ್ರತೀ ದಿನ ಬೆಳಿಗ್ಗೆ ಫೋನ್ ಮಾಡಿ ಸ್ವಲ್ಪ ಮಾತಾಡಿ ಎಬ್ಬಿಸು ಆಗ ಸರಿಯಾಗಿ ಎಚ್ಚರವಾಗುತ್ತೆ ಎಂದರೆ ಎರಡು ದಿನ ಮಾತ್ರರ..ಮೂರನೇಯ ದಿನದಿಂದ ಬೆಳಿಗ್ಗೆ ಫೋನ್ ರಿಂಗ್ ಆದ್ರೆ ಸಾಕು ಸ್ವಿಚ್ ಆಫ್ ಮಾಡಿ ಮತ್ತೆ ಮಲಗುವುದು.. ಅಲಾರಾಂ ಅಂತೂ ಎಷ್ಟು ಶಾಪವನ್ನು ತೆಗೆದುಕೊಂಡಿದೆಯೋ ಗೊತ್ತಿಲ್ಲ..  ನಾವು ಮೂವರೂ ಅಲಾರಾಂ ಇಟ್ಕೊಂಡು ಮಲಗ್ತಿದ್ವಿ.. ಮಲಗಿ ಸ್ವಲ್ಪ ಹೊತ್ತು ಆಯಿತೇನೋ ಎಂದಾಗ ಒಬ್ಬೊಬ್ಬರ ಅಲಾರಾಂ ಒಂದೊಂದು ತರಹ ಕೂಗಲು ಶುರು ಮಾಡ್ತಿತ್ತು..ಬಾಯಿಗೆ ಬಂದ ಎಷ್ಟೋ ಕವನಗಳು ಪರೀಕ್ಷೆಯ ದೃಷ್ಟಿಯಿಂದ ಮರೆಯಾಗುವಂತೆ ಮಾಡುತ್ತಿದ್ದೆ..

                  ಇನ್ನು ನನ್ನ ಒಬ್ಬಳು ರೂಂ ಮೇಟ್ ಪುಸ್ತಕ ಹಿಡಿದುಕೊಂಡೇ ಮಲಗುತ್ತಿದ್ದಳಾದರೂ, ಏ ನಿದ್ರೆ ಮಾಡ್ಬೇಡ  ಹೇಳಿದಾಕ್ಷಣ ನಾ ಓದ್ತಾ ಇದೀನಿ ನಿದ್ರೆ ಮಾಡಿಯೇ ಇಲ್ಲ ಎಂದು ಸಾಧಿಸುತ್ತಿದ್ದಳು. .ನಾನು ರಾತ್ರಿ ಬೇಗ ಮಲಗಿ ಬೇಗ ಏಳಬೇಕೆಂದುಕೊಂಡರೆ ಬೇಗ ಏನೋ ಮಲಗುತ್ತಿದ್ದೆನಾದರೂ ಏಳುವುದು ಸ್ವಲ್ಪ ಲೇಟಾಗಿಯೇ ಆಗುತ್ತಿತ್ತು.

   ಸ್ಟಡೀ ಹಾಲೀಡೇಸ್ ಲಿ ಕನಸುಗಳೂ ಬೀಳೋದು ಜಾಸ್ತಿ.. ಎದ್ದ ತಕ್ಷಣ  ಇವತ್ತು ನನ್ನ ಕನಸಿನಲ್ಲಿ ನೀನು ಬಂದಿದ್ದೆ ಎಂದು ಹೇಳುವುದರೊಳಗೇ ಬೆಳಕಾಗುತ್ತಿದ್ದವು.. ಪ್ರತೀ ದಿನವೂ ಒಬ್ಬರಿಗಲ್ಲ ಒಬ್ಬರಿಗೆ ಕನಸು..ಪರೀಕ್ಷೆಯಲ್ಲಿ ಡಿಬಾರ್ ಆದಂತೆ ಒಂದು ಕನಸು ಬಿದ್ರೆ, ಹಾಲ್ ಟಿಕೇಟ್ ಕಾಣೆಯಾದಂತೆ ಇನ್ನೊಂದು ಕನಸು..ಇನ್ನು ಫೇಸ್ಬುಕ್, ಬ್ಲಾಗ್ ಇಂದ ಸ್ವಲ್ಪ ದೂರವಿರೋಣ ಎಂದರೆ ಹಾಳೆಯಲ್ಲಿ ಬರೆದಿಟ್ಟ ಕವನವು ಬಾ ಎಂದು ಕರೆಯುತ್ತಿತ್ತು..

ಪರೀಕ್ಷೆ ಶುರುವಾಗಿ ಎಷ್ಟೊಂದು ದಿನ ಆಗಿತ್ತು ಅಬ್ಬ ಮುಗೀತಲ್ಲ..ಎಂದು ಖುಷಿ ಖುಷಿಯಲ್ಲಿದ್ದರೂ ನಾಳೆಯಿಂದ ಪರೀಕ್ಷೆಯನ್ನು ತುಂಬಾ ಮಿಸ್ ಮಾಡ್ಕೊಳ್ತೀವಿ ಎಂದೆಲ್ಲ ಅನಿಸಲು ಶುರುವಾಗಿತ್ತು.. ಲಾಸ್ಟ್ ಎಕ್ಸಾಂ  ಸೈಕಾಲಜಿ ಆಗಿದ್ದರಿಂದ ಬೇಗ ಬರೆದು ಪೇಪರ್ ಕೊಟ್ಟು ಬಂದರೆ ಸಾಕು ಎನ್ನುವಂತಾಗಿತ್ತು..

ನಿನ್ನೆ  ಮನವೆಲ್ಲಾ ಊರಿನ ಕಡೆಗೆ ಹೋಗುವ ದಿನವನ್ನು, ಅಣ್ಣನ ಮಗನನ್ನು ಎತ್ತಿ ಲಾಲಿ ಹಾಡುವ ಸಮಯವನ್ನು , ಅಮ್ಮನನ್ನು ನೋಡಿ ತಬ್ಬಿಕೊಳ್ಳುವ ಆಸೆಯನ್ನು  , ಅತ್ತಿಗೆ ಹತ್ತಿರ ಕಾಲೇಜಿನ ಸುದ್ದಿಗಳನ್ನೆಲ್ಲಾ ಹೇಳುವ ತವಕವನ್ನು, ಅಣ್ಣ ಹತ್ತಿರ, ಅಪ್ಪನ ಹತ್ತಿರ ಹೇಳುವ ಜೋಕುಗಳನ್ನು ಲೆಕ್ಕ ಹಾಕುತ್ತಿದ್ದ ನನಗೆ ಪರೀಕ್ಷೆ ಮುಗಿದರೂ ರಾತ್ರಿ ನಿದ್ರೆಯೇ ಬರಲಿಲ್ಲ...ಪರೀಕ್ಷೆಯ ದಿನ ಬೇಡವೆಂದರೂ ಬರುತ್ತಿದ್ದ ನಿದ್ರೆಯು ಈಗ ಎಲ್ಲಿ ಸರಿದು ಹೋಯಿತೋ..?

Monday, September 17, 2012

ಹಬ್ಬಕ್ಕೂ ಊರಿಗೂ.....

ಹಬ್ಬವೆಂದರೇ ಹಾಗೇ ಪ್ರತೀ ಹಬ್ಬಕ್ಕೂ ಊರಲ್ಲಿರಬೇಕೆನ್ನುವ ಆಸೆ....

ಇನ್ನೂ ತಿಂಗಳು ಇರುವಾಗಲೇ ಕ್ಯಾಲೆಂಡರ್ ತಿರುವಿ ಹಾಕಿ 

ದಿನ ಎಣಿಸಲು ಶುರು ಮಾಡಲಾರಂಭಿಸುವುದು...

ಈ ಹಾಸ್ಟೇಲಿನ ಟೈಂ ಟು ಟೈಂ ದಿನಚರಿಗಳು, ಒಂದಷ್ಟು ಸ್ಟ್ರಿಕ್ಟ್ ನೆಸ್ 

ಸಾಕಾಗಿಹೋಗಿರುತ್ತದೆ..ಅತೀ ಭಾವದ ಮನಸು ಊರನ್ನು ನೋಡುವ 

ಕನಸಿನಲಿ ಮುಳುಗಿ ಹೋಗಿರುತ್ತೆ..ಅಮ್ಮನ ಹತ್ತಿರ ಹೇಳುವ ಸುದ್ದಿಗಳು 

ಒಂದಷ್ಟು ಪೆಂಡಿಂಗ್ ನಲ್ಲಿರುತ್ತೆ..ದಿನಾ ಕಾಲೇಜು ಹಾಸ್ಟೇಲು ಎಂದು 

ಇರುವವರಿಗೆ ಊರಿಗೆ ಹೋಗುವುದು ಅದರಲ್ಲೂ ಹಬ್ಬಕ್ಕೆ ಹೋಗುವುದೆಂದರೆ 

ಎಲ್ಲಿಲ್ಲದ ಸಂಭ್ರಮ..ಆದರೆ ಈ ಹಬ್ಬಕ್ಕೆ ಪರೀಕ್ಷೆಗೆ ಅದೇನು ನಂಟೋ 

ತಿಳಿಯದು..ಜ್ಯೋತಿಷ್ಯಿಗಳ ಹತ್ತಿರ ದಿನ ನೋಡಿ ಇಟ್ಟಂತೆ ಪ್ರತೀ ಭಾರಿಯೂ 

ಹಬ್ಬಕ್ಕೆ ಹೋಗುವ ಕನಸಿಗೆ ಈ ಪರೀಕ್ಷೆಯು ಅಡೆತಡೆ..ಒಂದಷ್ಟು ಬೈಗುಳ 

ರೇಗಾಟ ಎಲ್ಲವೂ ಇದ್ದರೂ ಏನೂ ಮಾಡಲಾಗದ ಮಾತು.. ಈ ಪರೀಕ್ಷೆ ಕಂಡು

 ಹಿಡಿದ ಮಹಾತ್ಮರು ಯಾರಪ್ಪಾ ಎಂದು ಅನಿಸುವುದುಂಟು.. ಮನಸ್ಸೆಲ್ಲವೂ

 ಊರಲ್ಲಿಯೇ ಇರುತ್ತೆ.. ಯಾವಾಗಲೂ ಅಷ್ಟೆ ..ಅಂದುಕೊಂಡಿದ್ದೆಲ್ಲಾ 

ಆಗಬೇಕಲ್ಲ.. ಹಬ್ಬಕ್ಕೆ ಮನೆಯವರೆಲ್ಲಾ ಸೇರುತ್ತೇವಲ್ಲಾ ಎನ್ನುವ ಖುಷಿ 

ಒಂದೆಡೆಯಾದರೆ , ದೂರದ ಊರಿನಲ್ಲಿ ನೌಕರಿ ಮಾಡುತ್ತಿರುವ 

ಕುಟುಂದವರೆಲ್ಲರೂ ಸಿಗುತ್ತಾರೆಂಬ ಖುಷಿ..ಈ ಖುಷಿಯೆಲ್ಲವೂ ಏನೇ ಇದ್ದರೂ 

ಊರಿಗೆ ಹೋಗುವುದಾದರೆ ಮಾತ್ರ..ಬಸ್, ಟ್ರೇನ್ ಎಲ್ಲವೂ ಎಷ್ಟೇ ರಶ್ 

ಇದ್ದರೂ ಹೋಗಿಯೇಬಿಡಬೇಕೆನ್ನುವ ಹಠ...

ಅದೇನೇ ಇರಲಿ ಈ ಬಾರಿ ಅಧಿಕಮಾಸ ಬಂದಿದ್ದರಿಂದ 

ಪ್ರತೀ ಬಾರಿಯ ಹಬ್ಬದ ದಿನಗಳಿಗಿಂತ ಮುಂದೆ ಇರುವುದರಿಂದ  

ಪರೀಕ್ಷೆಯಿಂದ ಹಬ್ಬ ತಪ್ಪಿಸಿಕೊಂಡಿತು..ಈ ಬಾರಿಯ ಹಬ್ಬಕ್ಕೆ ಊರಲ್ಲಿಯೇ 

ಇರುವುದೇ ಖುಷಿ..

Tuesday, August 14, 2012

ಭಾವನೆ

ನನ್ನ ಉಸಿರನಲೂ ನಿನ್ನ ಭಾವನೆಗಳೇ  ಹರಿಯುತ್ತ
ನಾನು  ಬದುಕುವ ಉಸಿರೇ ನೀನಲ್ಲವೇ
ಭಾವಜೀವಿ ನಾನಾದರೆ ಅದರ ಭಾವನೆ ನಿನ್ನದಲ್ಲವೇ
ಭಾವನೆಗೆ ರೂಪ ಬೇಕೆ, ಬಣ್ಣ ಬೇಕೆ?
ನಮ್ಮಿಬ್ಬರಲೂ  ಅರ್ಥ ಮಾಡಿಕೊಳ್ಳುವ ಮನಸ್ಸೊಂದಿದ್ದರೆ
ನಿನ್ನ ಹೃದಯದಲಿ ಎಂದೂ 
ಗುನುಗುನಿಸುವ ಹಾಡು ನನ್ನದೇ
ನನ್ನ ಮನವು ಯೋಚಿಸುವ ಪ್ರತೀ ಕ್ಷಣವೂ ನೀನೇ
ನನ್ನ ಬಗೆಗಿನ  ನಿನ್ನ ಭಾವನೆಯಲ್ಲಿಯೇ ಬದುಕು ಕಟ್ಟುವವಳು
 ನಾನುಕಂಡ ಕನಸುಗಳೆಷ್ಟೋ ,
 ನನಸಾಗುವುದೆಷ್ಟೋಯಾವುದೂ ತಿಳೀದಿ
ಲ್ಲನಿನ್ನ ಬಗೆಗಿರುವ ಭರವಸೆಯೊಂದೇ 
ನನ್ನ ಬದುಕಿಗೊಂದು ಸ್ಪೂರ್ತಿಯೆಂದರೆ







Saturday, August 11, 2012

ಮೂಡಿಸಿದೆ .........

ಮನದೊಳಗಿನ ಬೆಚ್ಚಗಿನ ಭಾವನೆಯೆಲ್ಲವೂ
ನಿನ್ನೊಲುಮೆಯಿಂದ ಸಿಹಿಯಾಗಿಸಿ
ನಿನ್ನೊಳಗಿನ ನನ್ನೀ ಬದುಕ ಕಾವ್ಯವು
ಮೂಡಿಸಿದೆ ಎಂದಿಗೂ ಬೆಳದಿಂಗಳಂತಹ
ಬೆಳಕಿನ ಪ್ರೀತಿಯ,
 ಬದುಕಿನಲ್ಲಿ ಎಂದಿಗೂ ಕಪ್ಪು ಅಮಾವಾಸ್ಯೆಯು
ಸುಳಿಯಲಾರದೆಂಬ ಭರವಸೆಯ ಯೋಚನೆ,
ನಮ್ಮೊಳಗೆ ಅರ್ಥಮಾಡಿಕೊಂಡು ಬಾಳುವ ಬಾಳಿಗೆ
 ಬಂಧದ ಬೆಸುಗೆಯು ಗಟ್ಟಿಯಾಗಿಸಿದೆ ,
 ಜೊತೆ ಮಾತನಾಡಬೇಕೆಂದಿದ್ದ
 ಮಾತೆಲ್ಲವೂ
ಮಾತನಾಡಿಸಿದೆ ಅಸಾಧ್ಯ ಮೌನವ
ಸಾವಿರ ಪದಗಳಲ್ಲೂ ತಿಳಿಸಲಾಗದ ಅವರ್ಣನೀಯ ಪ್ರೀತಿಯು
ಮಾತಿನಿಂದ ಮೂಕವಾಗಿ ಮನಸಿನೊಂದಿಗೆ ಕಣ್ಣಿನಲ್ಲಿಯೇ
ಅರ್ಥೈಸಿಬಿಟ್ಟಿದೆ

Tuesday, July 10, 2012

ಬಾಂಧವ್ಯದ ಸೃಷ್ಟಿ

ಬದುಕಬೇಕು ಜೊತೆಗೆ
ಉಸಿರು ಇರುವ ವರೆಗೆ
ಆ ಉಸಿರೇ ನಮ್ಮಿಬ್ಬರ ಪ್ರೀತಿಯಾಗಿ
ಕೊನೆಯ ತನಕವೂ ಬೆಸೆದಿರಬೇಕು
ಸುಮಧುರ ಬಾಂಧವ್ಯವ
ಕಾಯುವ ಪ್ರತೀ ಘಳಿಗೆಯಲ್ಲೂ 
ಇಬ್ಬರ ನಗುವಿರಬೇಕು
ಬದುಕಬೇಕು ಕಣ್ಣಲ್ಲಿ ಕಣ್ಣಾಗಿ
ಮನದಲ್ಲಿ ಮನವಾಗಿ 
ನಂಬಿಕೆ ಭರವಸೆಯೆಲ್ಲವೂ
ಹರಿಯುತ್ತಿರಬೇಕು
ಪ್ರತೀ ಕ್ಷಣದಲ್ಲೂ
ನನ್ನ ಭಾವನೆಯ ಜಗತ್ತು
ನೀನೆಂದೂ ಆಗಿ
ನಿನ್ನ ಭಾವನೆಯ ಜಗತ್ತು
 ನಾನೆಂದು ಆಗಿ
ಎಂದೆಂದು ಇರಬೇಕು ಜೊತೆಜೊತೆಯಲಿ
ನಲುಮೆಯ ಜಗದ ಒಡೆಯ
ಎಂದೂ ನೀನಾಗಿರಬೇಕು
ನಿನ್ನ ಹೃದಯದಲಿ ನನ್ನ ಪ್ರೀತಿಯ ಸೃಷ್ಟಿ
ನನ್ನ ಹೃದಯದಲಿ ನಿನ್ನ ಪ್ರೀತಿಯ ಸೃಷ್ಟಿ
ಎರಡು ಹೃದಯ ಬಡಿತವು ಒಂದು
ಕೈ ಹಿಡಿದು ಸಾಗಬೇಕು
ಕೊನೆಯತನಕವೂ ಎಂದೆಂದು













Sunday, July 08, 2012

ಬಣ್ಣದ ಆಸೆಯೇ...


ಆಕೆಗೆ ಎಲ್ಲರಂತೆ ಬದುಕುವ ಆಸೆ
ಕೆಲವರೆಲ್ಲಾ  ಖುಷಿಯಿಂದ
ನಗುನಗುತ ಮದರಂಗಿ ಹಾಕಿಸಿಕೊಳ್ಳುತ್ತಿದ್ದರೆ,
ಕೇಳುವಳು ಅಮ್ಮನ ಬಳಿಗೆ ನನಗೂ ಆ ಬಣ್ಣವ ಕೊಡಿಸೆಂದು,
ಹೇಗೆ ಕೊಡಿಸಲಿ ನಾ
ಬದುಕಿಗೆ ಬಣ್ಣ ಕೊಡಲಾಗದಿದ್ದ ಮೇಲೆ
ಎಲ್ಲಿ ಬರಬೇಕು
ಆ ಮದರಂಗಿ ಚಿತ್ತಾರಗಳು
ಬಡವರ ಪಾಲಿನ ಮದರಂಗಿಯೆಂದರೆ
ಬಣ್ಣದ ಎಲೆಯಿಂದ ಬಿಡಿಸಲೇ?
ಎಂಬ ಅಮ್ಮನ  ಉತ್ತರಕೆ
ಹಾರಿ ಹೋಗಿತ್ತು  ಅವಳ ಮದರಂಗಿಯ ಕನಸುಗಳು
ಹಣೆಯ ಬರಹವೆಂಬ ಈ ಪಟ್ಟಕ್ಕೆ
ಚಿತ್ತಾರದ ಆಸೆಗಳೆಲ್ಲವೂ
ಕೇವಲ ಕನಸುಗಳಷ್ಟೇ
ಆಟಿಕೆಯ ಸಾಮಾನು, ರೆಕ್ಕೆ ಪುಕ್ಕವಿರುವ
ಬಣ್ಣದ ಅಂಗಿಗಳನ್ನು,
ಅವಳಿಗೂ ಕೊಳ್ಳುವ ಬಯಕೆ
ಜಾತ್ರೆಯ ತೊಟ್ಟಿಲಿನಲ್ಲಿ ಆಡುವ ಆಸೆ
ಟಿ.ವಿ ಯಲ್ಲಿ ಕಾರ್ಟೂನ್ ನೋಡುವ ಆಸೆ
ಎಲ್ಲವನ್ನೂ ಕಿತ್ತುಕೊಂಡಿತೇ
ಈ ಬಡತನ
ಆ ಮುಗ್ಧ ಹುಡುಗಿಯ
ಕನಸೆಂದು ನನಸಾಗುವುದೋ.......






 

Saturday, July 07, 2012

ನೀನೇ...


ಆ ನಿನ್ನ ಒಲವು
ಬಂದಿಹುದು ಸಿಹಿ ಸ್ವಪ್ನದಲು,
ಸಿಹಿ ಜೇನಿಗಿಂತಲೂ ಸಿಹಿಯಾದ
ನಿನ್ನ ಕಾಳಜಿಯ ಪರಿಯ
ಹೇಗೆ ವರ್ಣಿಸಲಿ
ಪ್ರೀತಿಯ ಆಗಸದಿ
ಹೊಳೆಯು ನಕ್ಷತ್ರ ನೀನು
ಹುಣ್ಣಿಮೆಯ ಬೆಳದಿಂಗಳ
   ಹೊಳಪು
ಮನದ ಮಲ್ಲಿಗೆಯ ಸುವಾಸನೆ  ನೀ
ಪ್ರತೀ ಕ್ಷಣವೂ ನನ್ನ ಹೃದಯದಲಿ ಕೇಳುವ
ನಾದ ನೀನೇ
ಬೆಳಗಿ ಜಾವದ ಬೆಳಕು ನೀನು
ಇದೆಲ್ಲವೂ ನೀನೇ? ಎಂಬ ಪ್ರಶ್ನೆಗೆ  ನನ್ನ ಉತ್ತರ
ನೀನು ನೀನಲ್ಲ,
ನಾನು ನೀನಾಗಿ , ನೀನು ನಾನಾಗಿ
ನಮ್ಮದೇ ಒಲವಿನ ಲೋಕ
ಬಾಳ ನಾವಿಕ
ಬದುಕಬೇಕು ನಾವು
ಎಂದೂ ಬಾಡದ ಹೂವಾಗಿ..