Monday, November 25, 2013

ವಿಳಾಸವಿಲ್ಲದ ಕನಸಿನ ಪ್ರೀತಿಯ ಸಾಲುಗಳು.....

ಆವತ್ತು ಏನೋ ಬರೆಯೋಣ ಅಂತ ಹೋದ್ರೆ ಬರೆಯುತ್ತಿದ್ದುದು ಪ್ರೀತಿಯ ಬಗೆಗೆ... ದೊಡ್ಡದಾಗಿ ಪ್ರೀತಿಯ ಹಾಡುಗಳೇ  ಕಿವಿಗೆ ಬಂದು ಅಪ್ಪಳಿಸುತ್ತಿತ್ತು.. . ನಿನ್ನ ಕನಸಿನ ಹುಡುಗ ಹೇಗಿರಬೇಕು ಎಂದು ರೂಂಮೇಟ್ ಕೇಳಿದ ಪ್ರಶ್ನೆಗೆ ನಾನು ಉತ್ತರ ನೀಡಲೇಬೇಕಾ? ಎಂದು  ಯೋಚಿಸಲು ಹೊರಟಿದ್ದೆ..  ಅವನ್ಯಾರೋ  ಒಂದು ದಿನ ಜೀವನದಲ್ಲಿ ಬರುವವನ ಬಗೆಗೆ ಕಟ್ಟಿದ ಕನಸುಗಳನ್ನೆಲ್ಲ ಹೇಳತೊಡಗಿದ್ದೆ.. ಬಹುಶಃ ಆ ಕನಸುಗಳಿಗೂ ಒಂದು ಪರಿಧಿಯೆಂಬುದಿಲ್ಲ ..ಮಿತಿಯೆಂಬುದಿಲ್ಲ. ಪಿಟೀಲು ಕುಯ್ಯಲು ನನಗೆ ಹೇಳಿಕೊಡಬೇಕಿಲ್ಲ...

ಅವನೆಂದರೆ ಪ್ರಪಂಚದಲ್ಲಿ ಅವನಿಗಿಂತಲೂ ನಾನ್ಯಾರನ್ನೂ ಹೆಚ್ಚು ಪ್ರೀತಿಸಬಾರದು..ನನ್ನ ಹುಚ್ಚು ಭಾವುಕತೆಗಳ ನಡುವೆ ಅವನದ್ದೊಂದು ಭಾವ ಸೇರಿ ಆಗಬೇಕು ಭಾವಗೀತೆಯ ಬದುಕು .. ಹಟಕ್ಕೆ ಬಿದ್ದ ಮನಸಿನ ಚಿತ್ರಗಳನೊಮ್ಮೆ ಬಣ್ಣ ಹಾಕಿ ಹೃದಯದ ಫ್ರೇಮ್ ನಲ್ಲಿ ಕಟ್ಟಿಸಿಡಬೇಕು.. ಕೆಲವೊಂದು ಬೇಸರ ಅಳು ದುಃಖಗಳ ನಡುವೆಯೂ ನನಗೆ ಅವನು ಅವಗೆ ನಾನೆಂಬ ಸಂತೋಷದ ದೋಣಿಯು ತೇಲಿ ಬಂದರೆ ಸಾಕು..ಪ್ರೀತಿಯೆಂಬ ಬೆರಳಿನ ತುದಿ ತಾಕಿದಾಗಲೂ ಅದೇ ಸಂತಸವಿದ್ದರೆ ನನಗೇನು ಬೇಕು.. ದಿಟ್ಟಿಸುತ್ತ ನೋಡುವಾಗ ಚಂದ್ರನೂ ಸರಿಸಾಟಿಯಾಗಲಾರ ಬೆಳದಿಂಗಳಲ್ಲಿ.. ಹಣೆಗೆ ಹಣೆ ತಾಕುವಷ್ಟು  ಹತ್ತಿರದಿಂದ ಮಾತನಾಡಿದರೆ ಕಳೆದು ಹೋದವೇನೋ ದಿನಗಳು..ಮರೆಯಾಗದೇ ಇರುವ ಹುಚ್ಚಿನ ಕನಸುಗಳಿಗೆ ನನಸೆಂಬ ಹಣೆಪಟ್ಟಿಯನ್ನು ಕೊಟ್ಟರೆ ಅದೆಂಥ ಸುಂದರ ಬದುಕು..

ಒಂದೇ ಒಂದು ದಿನ ಇಬ್ಬರಲ್ಲಿ ಒಬ್ಬರು ಮನೆಯಲ್ಲಿಲ್ಲದಿದ್ದರೂ ಕೇಳಿಸುತ್ತಿರುವಂತೆ  ಮಾತುಗಳು .. ಅವನ ಪ್ರತೀ ಮೌನದಲ್ಲಿಯೂ ನನ್ನ ಧ್ವನಿಯನ್ನು ಹೊರಹೊಮ್ಮಿಸಬೇಕಿದೆ..ಅವನು ನನ್ನ ಬದುಕಿನ ಭಾಗವಾಗಿರದೇ ನನ್ನ ಬದುಕೆಂಬ ಪಯಣಕ್ಕೆ ಇಟ್ಟುಬಿಡುವೆ ಅವನ ಹೆಸರನ್ನು..ಕಟ್ಟಿದ ಆಸೆಗಳ ಗೋಪುರದ ತುತ್ತ ತುದಿಯವೆರಗೂ  ಜೊತೆಗೇ ಕೈ ಹಿಡಿದು ನಡೆದರೆ ಅದ್ಯಾವ ಸುಸ್ತು, ದಣಿವು ಆಗಲಾರದು..ಹೊಟ್ಟೆ ಹುಣ್ಣಾಗಿಸುವಂತೆ ನಕ್ಕಾಗ , ಅದೇ ನಗುವಿನ ಕಣಗಳೆಲ್ಲ ಅವನನ್ನೇ ನೆನಪಿಸುವಂತದ್ದರೆ ನಾನೆಂದೂ ನಗುತ್ತಲೇ ಇರುವೆನು.


                                               ಕಳೆಯಬೇಕು ನೂರು ವರುಷಗಳು,
                                              ಯೌವ್ವನದಿ, ಮುಪ್ಪಿನಲಿ ಕೂಡಿ ಸಾಗುತ್ತ..
                                              ಸಾಲು  ಸಾಲು ದೀಪಗಳ ಬೆಳಕನ್ನು,
                                              ಕಣ್ಣಿನಲಿ , ಹೃದಯದಲಿ , ಮನಸಿನಲಿ ಕಾಣುತ್ತ...
                                              ಅಲೆಗಳಾಗಿ ಬರುವ ಖುಷಿಯಲಿ, ಬೇಸರದಿ
                                              ಒಬ್ಬರಿಗೊಬ್ಬರಿಗೆ ಆಸರೆಯಾಗುತ್ತ..
                                             ಸೊಗಸಾದ ಮೌನದ ಗಳಿಗೆಯಲಿ
                                              ಪ್ರೀತಿಯಿಂದ ದಿಟ್ಟಿಸುತ್ತ ...
                                             ಬೆಳದಿಂಗಳಲಿ ಕೈಹಿಡಿದು
                                              ತುತ್ತನ್ನೊಂದು ತಿನ್ನಿಸುತ್ತ
                                             ಮಗದೊಮ್ಮೆ ಮತ್ತೊಮ್ಮೆ ಕಳೆಯಬೇಕು
                                               ನೂರು ವರುಷಗಳನು


 ಸಂಬಂಧಗಳೆಂದರೆ ಭದ್ರವಾಗಿರಬೇಕು.. ಚಿನ್ನಕ್ಕಿಂತಲೂ ಹೊಳಪಿರಬೇಕು.. ಚಿನ್ನವನ್ನು ಫಾಲಿಶ್ ಮಾಡಿದಂತೆ ಹೆಚ್ಚು ಹೆಚ್ಚು ಪ್ರೀತಿಗಳಿಂದ ಸಾಗುತ್ತಿರಬೇಕು.... ಯಾರು ಸರಿ ಯಾರು ತಪ್ಪೆಂಬ ವಾದಕ್ಕಿಂದ ಬದುಕನ್ನು ಪ್ರೀತಿಯಲಿ ತೇಲಿಸುವಂತೆ.. ಪ್ರತೀ ಮುಂಜಾವೂ ಅವನ ಮುಖ ನೋಡಿ ಪ್ರೀತಿಯೊಂದಿಗೆ ಆರಂಭವೇ ಆಗಬಹುದು..ತುಂತುರು ಮಳೆಗಳಲಿ ಒಂದೇ ಸಮನೆ ಎಂದೋ ಬರೆದಿಟ್ಟ ಪ್ರೀತಿಯ ಕವನವನ್ನು ಓದಿದಾಗ ಅವನಿಂದ ಭೇಷ್ ಎಂಬ ಪದಗಳಿಗೆ ಕೊರತೆಯಿರಬಾರದು..ಅವನ್ಯಾರೋ ಏನ್ ಮಾಡ್ತಾ ಇದ್ದಾನೋ ಇಷ್ಟು ಹೊತ್ತಿಗೆ.. ಅಂತ ಎಷ್ಟೋ ಸಲ ಯೋಚಿಸಿದ್ದೇನೆ..  ಪ್ರೀತಿಯ ಪತ್ರಗಳನ್ನೆಷ್ಟೋ ವಿಳಾಸವಿಲ್ಲದವನಿಗೆ, ಗೊತ್ತಿಲ್ಲದವನಿಗೆ ಬರೆದು ಭದ್ರವಾಗಿ ಇರಿಸಿದ್ದೇನೆ....ನಾನು ಒಬ್ಬಂಟಿ ಅಂತ ಯೋಚಿಸ್ತಾ ಇದ್ದಾಗ .ಬಹುಶಃ ನನಗಾಗಿ ಹುಟ್ಟಿದ ಅವನೂ ನನ್ನಂತೆಯೇ ಯೋಚಿಸುತ್ತ ಇರಬಹುದೇನೋ....

Thursday, September 26, 2013

ಬೆಳದಿಂಗಳಲ್ಲೊಂದು ಒಂಟಿತನ

ಅದೊಂದು ಸುಂದರ ಬೆಳದಿಂಗಳ ರಾತ್ರಿ... ತಂಪು ತಂಗಾಳಿ ಮನದಲಿ ಸೋಕುತ್ತಿರಲು ಕನಸುಗಳ ಪದಗುಚ್ಚವು ಕವಲೊಡೆದು ಬಂದಿತ್ತು...ನಕ್ಷತ್ರಗಳನ್ನು ಎಣಿಸುತ್ತ, ಎಣಿಸುತ್ತ ಚಂದಿರನ ನಗೆಯನ್ನು  ನೋಡುತ್ತಿದ್ದೆ...ಭಾವನೆಗಳ ಹೊಸ್ತಿಲು ನೆಲಕ್ಕೆ ತಾಕದಂತೇ ಹಾರುತಿರಲು ಮನಸಿಗೆ ಮುದ ನೀಡುವ ಬಚ್ಚಿಟ್ಟ ನವಿಲುಗರಿ...ಆಗಲೇ ಕಾಡುವ  ಒಂಟಿತನ....ಅದೆಷ್ಟು ಅದ್ಭುತ ಎಂದರೆ ನನ್ನ ಮನಸ್ಸನ್ನು ನಾನೇ ಅರ್ಥಮಾಡಿಕೊಳ್ಳಲು, ಹೊಸ ಕನಸುಗಳಿಗೆ ಜಾಗ ಮಾಡಿಕೊಡಲು, ಒಬ್ಬಂಟಿಯಾಗಿ ಮಾತ್ರ ಆ ಜಗಕ್ಕೆ ಹೋಗಲು ಸಾಧ್ಯ..ಓ ಕನಸುಗಳೇ ನೀವೆಂದು ನನಸಾಗಿರುವಿರೆಂದು ಕೇಳುವುದು ನನ್ನ ಒಂಟಿತನದಲ್ಲಿಯೆ.....ಯಾಕೋ ಏನೋ ಆ ಬೆಳದಿಂಗಳ ರಾತ್ರಿಯಲಿ ಚಂದಿರನಿಗಿಂತಲೂ ನನ್ನ ಕನಸುಗಳೇ ಸುಂದರವಾಗಿ ಕಂಡಿದ್ದವು..ಚಂದಿರನ ಜೊತೆಗೆ ನನ್ನ ಕನಸುಗಳನ್ನು ಹೋಲಿಸಿಕೊಳ್ಳುತ್ತ  ಒಬ್ಬಳೇ ಕೂತುಬಿಟ್ಟೆ....ರಾಯರು ಬಂದರು ಹಾಡೇಕೋ ನೆನಪಾಗುತ್ತಿತ್ತು..ಮುಂಬಾಳ ಸವಿಗನಸನು ಹೆಣೆಯಲು ಆ ಚಂದ್ರನೂ ನಸುನಕ್ಕು ಬೆಳಕನ್ನು ಹರಿಸಿದನು..

.ಅದೇ ಬೆರಗಾಗಿ ಸಾಗಿದಷ್ಟು ದೂರ ದೂರ ಕಂಗಳು ಮಿಟಿಮಿಟಿಸುತ್ತಿತ್ತು..ಒಂದು ಕವನವನ್ನು ಬರೆಯೋಣವೆಂದರೆ ಪದಗಳ ಮಿತಿಯೇ ತಾಕದಲ್ಲ.ಕೆಲವೊಂದು ದಿನವೇ ಅಷ್ಟು ಸುಂದರವಾಗಿರುತ್ತೆ..ಕಾರಣವೇನೆಂದು ಗೊತ್ತಿರುವುದಿಲ್ಲ..ಆದರೆ ಭಾವಗಳು ಎದ್ದು ಓಡಾಡುತ್ತಿರುತ್ತವೆ. ಸಣ್ಣಗೆ ಬೀಳುತ್ತಿದ್ದ ತುಂತುರು ಮಳೆಗೆ ಸಾಟಿಯಾಗುವೆಯೇನೋ ಎಂಬಂತೆ ''ತುಂತುರು ಅಲ್ಲಿ ನೀರ ಹಾಡು ಕಂಪನಾ ಇಲ್ಲಿ ಪ್ರೀತಿ ಹಾಡು'' ಎಂಬ ಹಾಡನ್ನು ಗುನಿಗುನಿಸುತ್ತಿತ್ತು ಮನಸ್ಸು..ಮಿಂಚಿನ ಒಂದು ಬೆಳಕು ಮನದಲ್ಲಿ ಸುಳಿಯದಿದ್ದರೂ ದೂರದಿಂದಲೇ ನೋಡಿ ಖುಷಿಪಡುವಂತೆ ಮಾಡಿತ್ತು.ಒಂಟಿತನವೆಂಬುದು ಮನಸ್ಸನ್ನು ಹಾಡಿಸಿ, ಕೇಳಿಸಿ ಎಂದೋ ಓದಿದ ಸರ್ದಾಜಿಯ ಜೋಕನ್ನು ನೆನಪು ಮಾಡಿಸಿ ದೊಡ್ಡದಾಗಿ ಒಬ್ಬಳೇ ನಗುವಂತೆ ಮಾಡಿತ್ತು...ಒಂಟಿತನದ ಸೋನೆ ಮಳೆಯು ಹೃದಯವು ಒದ್ದೆಯಾಗದಂತೇ ತಡೆದು, ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ ಎಂದು ದಾರಿಹೋಕರ ಮೊಬೈಲ್ ನಿಂದ ಮತ್ತೊಂದು ಪದ್ಯ ಕೇಳಿದೊಡನೆ, ಬೆಳಕು ಶುಭ್ರವಾಗಿ ಮುಖದ ಮೇಲೆಯೇ ಬಿದ್ದಿತು.

ಸಮಯ ಇನ್ನು ಹತ್ತಾದರೂ ನೆಚ್ಚಿತೊಂದು ಬೆಟ್ಟದ ಕನಸುಗಳು, ಬೇಕುಬೇಡಗಳು, ಕಷ್ಟ ಸುಖಗಳೆಲ್ಲ ಸೇರಿ ಅದೇನೋ ಹೊಸ ರೂಪ..ಎಲ್ಲರೂ ಹೆದರುವ ಒಂಟಿತನದಲ್ಲಿ ಇಷ್ಟೊಂದು ಹಿತವಿದೆಯಾ? ಎಂದು ಆ ಸಮಯಕೆ ತೋಚದಿರಲಿಲ್ಲ..ಎಲ್ಲರೂ ಬೇಡ ವೆಂದು ದೂಡುತ್ತ ಕಳುಹಿಸುವ  ಒಂಟಿತನಕ್ಕೂ ತನ್ನದೇ ಆದ ಭಾವಗಳಿವೆ, ಮನಸುಗಳನು ಓದುವ ಸಾಮರ್ಥ್ಯವಿದೆ..ಎಷ್ಟೋ ಆಗದಿರುವ ಕೆಲಸವನ್ನು ಯೋಚಿಸಿ ಪೂರ್ಣಗೊಳಿಸುವ ಅದ್ಭುತ ಶಕ್ತಿಯಿದೆ..

ಆದರೆ ನಾವು ಧನಾತ್ಮಕವಾಗಿ ತೆಗೆದುಕೊಳ್ಳಬೇಕಷ್ಟೆ..ಕೆಲವೊಂದು ಬಾರಿ ಅನಿಸುವುದು ಬೇಸರವೆಂದರೆ ನಮ್ಮ ಮನದ ಯೋಚನೆಗಳು ಋಣಾತ್ಮಕವಾಗಿ ಹರಿದಾಗ..ಆದರೆ  ಸ್ನೇಹ, ಪ್ರೀತಿ, ವಿಶ್ವಾಸದ ಸುಖದಲ್ಲಿ ಪ್ರೀತಿ ಪಾತ್ರದವರೆಡೆ ಯೋಚಿಸಲು ಸಮಯವನ್ನು ಮೀಸಲಿರಸಬೇಕೆಂದರೆ  ಅದು ಒಂಟಿತನದಲ್ಲಿಯೇ....


Tuesday, June 04, 2013

ನೀನಾಗುವೆಯಾ..?

ಬಣ್ಣವಾಗಿ ಜೀವ ತುಂಬುವೆಯಾ

ನನ್ನ ಮದರಂಗಿ ಚಿತ್ರಕೆ..

ಬೆಳಗಿನ ಕನಸಿನಲಿ ಬಂದು ತಟ್ಟಿ

ಎಬ್ಬಿಸಿ ಪ್ರೀತಿಯಿಂದ ಕರೆಯುವೆಯಾ...

ಮುಸ್ಸಂಜೆಯ ತಂಗಾಳಿಯಲಿ ಬೆಚ್ಚನೆಯ

ಕನಸುಗಳನು ನನ್ನಲ್ಲಿ ಕಾಣುವೆಯಾ..

ಜನುಮ ದಿನದಂದು ಶುಭಾಶಯ ತಿಳಿಸುವ ಮೊದಲಿಗ

ನೀನಾಗುವೆಯಾ...

ಹೊಳೆಯುವ ಉಂಗುರದ ಶುಭ್ರ

ಹರಳು ನೀನಾಗುವೆಯಾ...

ತುಟಿಯಂಚಿನಲ್ಲಿ ಬರುವ ನಗುವಿನ

ಸೌಧವಾಗುವೆಯಾ..

ಅತ್ತಾಗ ಒಲವಿನ ಲೋಕಕ್ಕೆ  ಕರೆದೊಯ್ದು

ಸಾಂತ್ವನ ಹೇಳುವೆಯಾ..

ಬಚ್ಚಿಟ್ಟ ಆಸೆಗಳಿಗೆ ಸೂತ್ರವನು ಕಟ್ಟಿ

ಆಗಸದೆತ್ತರಕೆ ಹಾರಿಸುವೆಯಾ..

ನನ್ನ ಪಾಲಿಗೆ ಎಲ್ಲವೂ ನೀನೇ

ಆಗುವೆಯೆಂದು...??


Wednesday, February 20, 2013

ಅದೇಗೆ ಕಳೆಯಿತೋ....


ಇನ್ನು ಸ್ವಲ್ಪ ದಿನಗಳು ಮಾತ್ರ.. ಈ ಕಾಲೇಜ್ ಬಿಟ್ಟು ಹೋಗ್ತೀರಾ ಬೇಜಾರಾಗ್ತಾ ಇದ್ಯಾ ? ಅಥವಾ ಖುಷಿ ಆಗ್ತಾ ಇದೆಯಾ?
ಎಂದು ಆ ಕ್ಲಾಸಿನಲ್ಲಿ ಉಪನ್ಯಾಸಕರು ಎಲ್ಲರಲ್ಲಿಯೂ  ಕೇಳಿದಾಗ ಉತ್ತರವೇ ಬಂದಿರಲಿಲ್ಲ..ಬದಲಿಗೆ ನೆನಪುಗಳ ಲೋಕಕ್ಕೆ ಪಯಣಿಸಿದ್ದೆ....
ಮೂರು ವರುಷಗಳ ಹಿಂದಿನ ಮಾತು ಆಗ ತಾನೇ ಶಿರಸಿಯಲ್ಲಿ ಪಿ.ಯು.ಸಿ ಮುಗಿಸಿದ ನನಗೆ   ಮುಂದೆಲ್ಲಿ ಎಂಬ ಪ್ರಶ್ನೆ ಕಾಡಿತ್ತು..ಅಪ್ಪ ಹತ್ತಿರ  ಕರೆದು ಉಜಿರೆಗೆ ಹೋಗು ಎಂದಾಗ ಮುಖ ಸೊಟ್ಟಗಾಗಿತ್ತು..ಏಕೆಂದರೆ ನನ್ನಲ್ಲಿ ಉಜಿರೆ ಎಂದರೆ ಕೇವಲ ಸ್ಟ್ರಿಕ್ಟ್, ಮನೆಯಿಂದ ದೂರ ಮತ್ತು ಸೆಕೆ ಜಾಸ್ತಿ  ಎಂಬ ಭಾವನೆಯಿತ್ತು.. ಮನೆಯಲ್ಲೆಲ್ಲ ಇಡೀ ದಿನವೂ  ಅದರ ಬಗ್ಗೆಯೇ ಮೀಟಿಂಗು.."ನಿಂಗೋ ಎಷ್ಟ್ ಹೇಳಿದ್ರೂ ಅಷ್ಟೆ ನಾ ಅಂತೂ ಹೋಗ್ತ್ನಿಲ್ಲೆ"
 ಎಂಬ ನನ್ನ  ವಾದದ ಕಡೆಗೆ ಅಮ್ಮನೂ ಇದ್ದಳು..ಯಾವಾಗಲೂ ನನ್ನ ಬೇಕು ಬೇಡಗಳನ್ನು , ನನ್ನ ಆ ಸೆಗಳನ್ನು ಎಲ್ಲವನ್ನೂ ಖುಷಿಯಿಂದಲೇ ನಾ ಹೇಳಿದಂತೆಯೇ  ಕೇಳುತ್ತಿದ್ದ ಅಪ್ಪನು ಉಜಿರೆಗೆ ಹೋಗುವ ವಿಷಯದಲ್ಲಿ ಮಾತ್ರ  ಸ್ಟ್ರಿಕ್ಟ್ ಆಗಿ ಕೂತಿದ್ದ..
ಅಂತೂ ಅಣ್ಣನ ಜೊತೆಗೆ ಉಜಿರೆಯ ಕಡೆಗೆ ಪ್ರಯಾಣ ಬೆಳೆಸಿದೆ ..ಉಡುಪಿಯ ವರೆಗೆ ಮಾತ್ರ ತಲುಪಿದ್ದೆವು.. ಇನ್ನೂ ಮೂರು ತಾಸುಗಳಂತೆ ಉಜಿರೆಗೆ ಎಂದಾಗ ವಾಪಸ್ಸು ಮನೆಗೆ ಹೋಗೋಣ ಎನ್ನಲು ಶುರು ಮಾಡಿದೆ ನಾನು... ಪ್ರೀತಿಯ ಮಾತುಗಳಿಂದ ಅಣ್ಣನು ಉಜಿರೆಗೂ ತಲುಪಿಸಿದ.. ಕಾಲೇಜಿಗೆ  ತಲುಪಿದ ಕೂಡಲೇ ಸ್ಥಳದಲ್ಲಿಯೇ ಅಡ್ಮಿಷನ್ ಸಿಕ್ಕಿತ್ತು..ಅದನ್ನೂ ಮಾಡಿಸಿದ ಅಣ್ಣ..
ಮನೆಗೆ ಹಿಂತಿರುಗಿದಾಗ ಅಪ್ಪನ ಮುಖದಲ್ಲಿ ಖುಷಿಯಿತ್ತು.." ಪಾಪ ನಮ್ಮನೆ ತಂಗಿ ಹತ್ರ  ಮೊಬೈಲ್ ಇಲ್ಲೆ  ನಾ ಹೆಂಗಿದ್ದ ಬೇಕಾದ್ರೂ ತೆಗೆಸಿ ಕೊಡ್ತೆ ನನ್ನ ಬಂಗಾರ " ಎಂದೆಲ್ಲಾ ನನ್ನನ್ನು ಖುಷಿ ಪಡಿಸಲು ಪ್ರಯತ್ನಿಸಿದರೂ ನನ್ನ ಮುಖದಲ್ಲಿ ನಗೆಯು ಬಂದಿರಲಿಲ್ಲ.. ಅಮ್ಮನ ತೋಳಿನಲ್ಲಿ ಅತ್ತು ಬಿಟ್ಟಿದ್ದೆ..."ನಿಂಗೆ ಮನೆ ಬೇಜಾರ್ ಬಂದ್ರೆ ಒಂದು ಫೋನ್ ಮಾಡು ನಂಗೋ ಇಬ್ರೂ ಅಲ್ಲಿ ಒಂದು ದಿನದಲ್ಲೇ ಬತ್ಯೋ" ಎಂದಾಗ ಸ್ವಲ್ಪ ಖುಷಿಯಾಯಿತು..ಅಂತೂ ಹೊರಟೆ..
ಅಂದು ಕಾಲೇಜಿನ ಮೊದಲನೇ ದಿನ ಜೊತೆಗೆ ನನ್ನ ಜನುಮದಿನ...ಗೊತ್ತಿಲ್ಲದ ಕಾಲೇಜಿನಲ್ಲಿ ಶುಭಾಷಯ ಹೇಳುವವರು ಯಾರೂ ಇರಲಿಲ್ಲ..ಆದರೂ ಸಂಭ್ರಮವಿತ್ತು ಕೆಲವೇ ದಿನಗಳಲ್ಲಿ ಆ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಿದ್ದೆ..ಐಡಿ ಕಾರ್ಡಿನ ಮೇಲೇ ವ್ಯಾಲಿಡಿಟಿಯನ್ನು ನೋಡುತ್ತ ದೇವ್ರೇ ಇನ್ನೂ ಮೂರು ವರುಷಗಳು ಇಲ್ಲೇ ಇರ್ಬೇಕಾ! ಎಂದೆನ್ನಿಸುತ್ತದ್ದರೂ ಬಹು ಬೇಗ ಹೊಂದಿಕೊಂಡಿದ್ದೆ..
ಆಗ ನಾನು ಅದೆಷ್ಟು ಮುಗ್ಧಳಾಗಿದ್ದೆಯೆಂದರೆ ಯಲ್ಲಾಪುರದವರು ಉಜಿರೆಯಲ್ಲಿ ಯಾರಾದ್ರೂ ಇದ್ರೆ ಸಾಕು ಗೊತ್ತಿಲ್ದೇ ಇದ್ರೂ ಹೋಗಿ ಮಾತನಾಡಿಸುತ್ತಿದ್ದೆ...ನನ್ನ ರೂಂಮೇಟ್ ಇದೇ ಕಾರಣಕ್ಕೆ ಯಾವಾಗಲೂ ಹೇಳ್ತಾ ಇರ್ತಿದ್ಲು.."ಏನೇ ಯಲ್ಲಾಪುರದ್ದೇನಾದ್ರೂ ಸಂಘ ಶುರು ಮಾಡ್ತೀಯ ಹೆಂಗೆ" ಎಂದು..  ಪ್ರತೀ ರಜಾದಿನಗಳಲ್ಲಿ ಧರ್ಮಸ್ಥಳ  ಮಂಜುನಾಥನ ದರ್ಶನಕ್ಕೆ ಹೋಗುತ್ತಿದ್ದೆವು..ಕ್ಲಾಸಿನಲ್ಲಿ ಚುಕ್ಕಿ ಆಟ ಆಡುತ್ತಿದ್ದ ಸಂಭ್ರಮವಂತೂ ಹೇಳತೀರದು..
ಮೂರು ವರುಷಗಳು ಅದೇಗೆ ಕಳೆಯಿತೋ ...ಒಂದೂ ಗೊತ್ತಿಲ್ಲ ..ದಿನಗಳು ಯಾರಿಗೂ ಕಾಯದೇ ಕಳೆದುಬಿಡುತ್ತವೆ...
ಮತ್ತದೇ ಪ್ರಶ್ನೆ ಮುಂದೇನು? ಎಂಬುದು....
ಕಾಲ,ಸಮಯ, ದಿನಗಳು ಒಂದೊಂದಾಗಿ ಉರುಳುತ್ತ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತೆ..ಮೊದಲು ಅದೇಗೆ ಇಲ್ಲಿರಬೇಕೋ..ಎಂದುಕೊಂಡರೂ ನಂತರದ ದಿನಗಳು ಇಲ್ಲಿಂದ ಬಿಟ್ಟು ಹೋಗಬೇಕಲ್ಲ ಎಂಬ ಬೇಸರ..
ನಮ್ಮೊಳಗೇ ಇದ್ದ ಚಿಕ್ಕಪುಟ್ಟ ಖುಷಿಗಳು, ಬೇಸರಗಳು, ಸಾಂತ್ವನದ ಮಾತುಗಳು ಖುಷಿಯನ್ನು, ಬೇಸರವನ್ನು ತಂದುಕೊಂಡುತ್ತೆ..
ಎಲ್ಲದಕ್ಕೂ ಕಾರಣ ಮನಸ್ಸೇ....ಅದೇಕೋ ಒಂದು ರೀತಿಯ ಬೇಸರ ಜಿರೆಯನ್ನು ಬಿಟ್ಟು ಹೋಗಬೇಕಲ್ಲಾ ಎಂದು...

Monday, December 17, 2012

ಬದುಕಿನ ಬದುಕು ನೀ..........

  ನನ್ನೊಲವ ದಾರಿಯಲಿ ಬರಬೇಕೆನ್ನುವ

 ಪ್ರೀತಿಯ   ಹೆಜ್ಜೆಗಳಲಿ

ನೀನೆಂದು ಬಂದು ಸಾಗುವೆ

ಕಣ್ಣಿನಲಿ ಕಣ್ಣಂತೆ ಕಾಯುತಿರುವ

ಮನಸು ಕನಸುಗಳ

ಪಿಸುಮಾತುಗಳು.....

ನನ್ನ ಮನವು ಇಂದಿಗೂ ಎಂದಿಗೂ

ಹೇಳುತಿದೆ  ಕನಸುಗಳು

ನನಸಾಗುವಂತಿದ್ದರೆ

ನಿನ್ನ ಜೊತೆಗೇ ಎಷ್ಟು ಸುಂದರವೆಂದು,

ನೀ ಕಟ್ಟುವ ಪ್ರೀತಿ ಸೌಧದಲಿ

ನನಗೆ ಜಾಗವಿದೆಯೆಂದರೆ

ಕಟ್ಟೋಣ ಬದುಕನ್ನೂ....

ಕಣ್ಣಿನ ಕ್ಯಾಮರಾದಲಿ ತೆಗೆದ

ಫೋಟೋವನ್ನು ಹೃದಯದಲಿ

ಕಟ್ಟಿಸಿಡಲೇ ..

ನೀ ಹಣತೆ ಹಚ್ಚುವೆಯಾದರೆ

ಅದರ ಬೆಳಕು ನಾನುಗುವೆ ನಿನಗೆ

ದಾರಿಯುದ್ದಕ್ಕೂ ಎಂದಿಗೂ

ಕೊನೆಯವರೆಗೂ ...

ಖಾಲಿಯಾಗದ ಒಂದಷ್ಟು ಭಾವನೆಗಳ

ಲೋಕದಲಿ

ನಾನು ನೀನು ಮಾತ್ರ..

ಬದುಕಿನಲ್ಲಿಯ ಬದುಕು ನೀನು.

Tuesday, December 11, 2012

ಪರಿಹಾರವಿಲ್ಲವೇ??

ಹಗಲು ಅಮವಾಸ್ಯೆ ಕವಿದ
ಬದುಕಿನ ಆಗಸದಲಿ
ಒಂದುಹೊತ್ತಿನ ಅನ್ನಕ್ಕಾಗಿ ಪರದಾಡುವ ,
ಯಾರದ್ದೋ ಮನೆಯ ಪಾತ್ರೆ ತೊಳೆದು
ದುಡಿಯುವಳು ಆಕೆ ತನ್ನವರಿಗಾಗಿ
ಒಂದೆಡೆ ಭೃಷ್ಟಾಚಾರದ ನಾಟ್ಯವಾದರೆ
ಇನ್ನೊಂದೆಡೆ ಬಡತನದ ಬೇಗೆ
ರೋಗ ರುಜಿನಗಳ ಕೊರತೆ
ಎಂದೂ ವಾಸಿಯಾಗದ ಗಾಯದ ಕಲೆಗಳು
ಹಸಿವಿನಿಂದ ಬಳಲಿದ ಜೀವಕೆ
ವಿಟಮಿನ್ ಕೊರತೆಯೆಂದರು ವೈದ್ಯರು,
ಕುಡಿತಕ್ಕಾಗಿ ಹಣ ಬೇಕೆಂದು
ಹೊಡೆಯುವ ಗಂಡ ಒಂದೆಡೆಯಾದರೆ
ಚಾಕಲೇಟ್ ಕೊಡಿಸಮ್ಮ  ಎಂದು ಅಳುವ ಕಂದಮ್ಮಗಳು
ಏನಾದರೂ ಸಹಾಯ ಮಾಡಿ ಎಂದು ಬೇಡಿದರೆ
ನೋಡಿ ನಗುವವರು ಬಿಟ್ಟರೆ
ಕೇಳುವವರು ಯಾರು??
ಅಪರೂಪದ ಖಾಯಿಲೆಗೆ
ಬೆಟ್ಟದ ಸೊಪ್ಪೇ ಔಷಧ
ಸಂಕವಿಲ್ಲದ ಹಳ್ಳವ ದಾಟಿ ಹೋಗಬೇಕು
ಚಪ್ಪಲಿಗಳಿಲ್ಲದ ಕಾಲಿಗೆ ಮುಳ್ಳು ಚುಚ್ಚಿದರೆ ಕೇಳುವವರಿಲ್ಲ
ಜೋರು ಮಳೆ ಬಂದರೆ ಹಾರಿ ಹೋಗುವ ಮನೆ
ಪ್ರತೀ ಕ್ಷಣವೂ ಬಡತನದ ಚಿಂತೆ
 ಹೇಗೆ ದುಡಿಯಲಿ ಎಂದು ಚಿಂತಿಸುವುದರೊಳಗೆ ಮಾನಸಿಕ ಕಿರುಕುಳ
ಅವಳಿಗೂ ಮನಸು, ಕನಸು ಎಲ್ಲವೂ ಇದ್ದು
ಅರ್ಥ ಮಾಡಿಕೊಂಡ ಹೃದಯವಿಲ್ಲ
ಅಡಗಿರುವ ಅವ್ಯಕ್ತ ಭಾವನೆಗಳಿಗೆ
ಉತ್ತರವೆಂದೂ ಸಿಗಬಹುದೇ?
ಅಮವಾಸ್ಯೆ ಕಳೆದು ಒಂದು ಚೂರಾದರೂ ಬೆಳಕು
ಹರಿದರೆ ಎಂಬ ಆಶಯ
ಎಂದು ಸಿಗಬಹುದು ಪ್ರಪಂಚದಲ್ಲಿರುವ  ಬಡವರಿಗೆ
ಪರಿಹಾರ??
ಮಕ್ಕಳಿಗೆ ಸರಿಯಾದ ಉಪಹಾರ?
ಹತಾಶೆ ನೋವು ಬದುಕು ಒಡ್ಡಿದ ಪರೀಕ್ಷೆಗೆ
ಎಂದೂ ಕಾಯುತ್ತಿರಬೇಕೆ?







Friday, November 30, 2012

ಖುಷಿಯ ಗಂಟನ್ನು ಇರಿಸಿದ್ದವು

ಮೂಡಣದಿ ಸೂರ್ಯನ ನಸುಗೆಂಪು
ಕೆನ್ನೆಯ ಆಗಸವು
ನಾಚುತ್ತಾ ಸ್ವಾಗತಿಸುತಿತ್ತು
ಪ್ರೀತಿಯಲಿ ನೇಸರನ ತುಸು ಬೆಳಕು
ಅಂಬರವ ಹೊಳೆಯುವಂತೆ ಮಾಡಿತ್ತು
ಹಕ್ಕಿಗಳೂ ಜೊತೆ ಸೇರಿ ಹಾಡುತ್ತಾ
ಸಂಗೀತವ ಆಲಿಸುವಂತೆ ಮಾಡಿದ್ದವು
ಭಾವನೆಗಳ ಲೋಕದಲಿ
ಪಯಣಿಸುತ್ತಿದ್ದ ನಾ....ಮರೆತಿದ್ದೆ ನನ್ನನ್ನೇ!!
ತಂಗಾಳಿಯ ಹಿತ ಸ್ಪರ್ಶವು
ಒಂದಷ್ಟು  ಕನಸುಗಳನು
ಹೊತ್ತು ತಂದಿದ್ದವು,
ಇಬ್ಬನಿಯು ಮುತ್ತಿನಂತೇ
ಹೊಳೆಯುತ್ತಾ
ಖುಷಿಯ ಗಂಟನ್ನು ನನ್ನಲ್ಲಿ
ಇರಿಸಿದ್ದವು,
ಒಂಟಿತನವೆಲ್ಲಾ ಮರೆತು
ನಿಸರ್ಗದ ಸಹಜ ಸುಂದರತೆಗೆ
ನನ್ನೀ ಹೃದಯವು ಸೇರಿ ಹೋಗಿತ್ತು..





Monday, November 05, 2012

ಅಂತರಂಗದ ಕನಸುಗಳು


ಮನದ ಗೋಡೆಯೊಳಗೆ ಕಟ್ಟಿಟ್ಟ

ಕನಸು

ಅಂತರಂಗದ ಮಾತುಗಳಿಗೆ 

ಹಾಡು ಬರೆಯಲು

ಹೊರಟಾಗ ಪ್ರೀತಿಯ ಬಗೆಗೆ 

ಬರೆದುಬಿಡುತ್ತೆ ಅರಿವಿಲ್ಲದೆಯೇ

ಭಾವನೆಗಳ ಸಂಗಮದಲ್ಲಿ 

ಒಲವೆಂಬ ನಂಟು ಬೇಕೆನಿಸಿ

 ನನ್ನ ಹೃದಯದೊಳಗೇ ಹೇಳಲಾರದ 

ವರ್ಣಿಸಲಾಗದ  

ಒಂದಷ್ಟು ಕನಸಿನ ಮೂಟೆಗಳು

ಬಂದ ಹಾಗೆ ಬದುಕನ್ನು ಸ್ವೀಕರಿಸುವುದಕ್ಕಿಂತ

ಬೇಕಾದ ಹಾಗೆ ರೂಪಿಸಿಕೊಳ್ಳುವ 

ನನ್ನ ಬದುಕಿನ ಶಿಲ್ಪಿಯು ನಾನಾಗಬೇಕೆಂದು..

 

 

Tuesday, October 23, 2012

ನಿದ್ರೆಯನ್ನು ಹುಡುಕಿದೆ........

ಪರೀಕ್ಷೆಯೇನೋ ಮುಗೀತು ..ಸರಿಯಾಗಿ ನಿದ್ರೆ ಮಾಡ್ದೇ ಎಷ್ಟೋಂದು ದಿನ ಆಯ್ತು.. ನಿನ್ನೆ ಪರೀಕ್ಷೆ ಮುಗಿದ ಸಂಭ್ರಮದಲ್ಲಿ ಬೇಗ ನಿದ್ರಿಸಬೇಕೆಂದು ಮಲಗಿದರೆ ನಿದ್ರೆಯೇ ಬರುತ್ತಿಲ್ಲ.

. ಹದಿನೈದು ದಿನಗಳಿಂದ ಪರೀಕ್ಷೆಗೆ ತಡರಾತ್ರಿಯವರೆಗೆ ಕೂತು, ಬೆಳಿಗ್ಗೆ ಬೇಗ ಏಳುವುದೆಂದರೆ ಕಬ್ಬಿಣದ ಕಡಲೆಯಂತಾಗುತ್ತಿತ್ತು.. ಓದುತ್ತಾ ಓದುತ್ತಾ ನಿದ್ರಾದೇವಿಯು ಸೆಳೆದು ಕೊಳ್ಳುತ್ತಿತ್ತು..ಬೆಳಿಗ್ಗೆಯಂತೂ ಬಿಡಿ..ಪುಸ್ತಕ ನೋಡಿದರೆ ಸಾಕು ಕಣ್ಣುಗಳು ತನ್ನಿಂದ ತಾನೇ ಮುಚ್ಚುತ್ತಿತ್ತು..ಅಮ್ಮನ ಹತ್ತಿರ ಪ್ರತೀ ದಿನ ಬೆಳಿಗ್ಗೆ ಫೋನ್ ಮಾಡಿ ಸ್ವಲ್ಪ ಮಾತಾಡಿ ಎಬ್ಬಿಸು ಆಗ ಸರಿಯಾಗಿ ಎಚ್ಚರವಾಗುತ್ತೆ ಎಂದರೆ ಎರಡು ದಿನ ಮಾತ್ರರ..ಮೂರನೇಯ ದಿನದಿಂದ ಬೆಳಿಗ್ಗೆ ಫೋನ್ ರಿಂಗ್ ಆದ್ರೆ ಸಾಕು ಸ್ವಿಚ್ ಆಫ್ ಮಾಡಿ ಮತ್ತೆ ಮಲಗುವುದು.. ಅಲಾರಾಂ ಅಂತೂ ಎಷ್ಟು ಶಾಪವನ್ನು ತೆಗೆದುಕೊಂಡಿದೆಯೋ ಗೊತ್ತಿಲ್ಲ..  ನಾವು ಮೂವರೂ ಅಲಾರಾಂ ಇಟ್ಕೊಂಡು ಮಲಗ್ತಿದ್ವಿ.. ಮಲಗಿ ಸ್ವಲ್ಪ ಹೊತ್ತು ಆಯಿತೇನೋ ಎಂದಾಗ ಒಬ್ಬೊಬ್ಬರ ಅಲಾರಾಂ ಒಂದೊಂದು ತರಹ ಕೂಗಲು ಶುರು ಮಾಡ್ತಿತ್ತು..ಬಾಯಿಗೆ ಬಂದ ಎಷ್ಟೋ ಕವನಗಳು ಪರೀಕ್ಷೆಯ ದೃಷ್ಟಿಯಿಂದ ಮರೆಯಾಗುವಂತೆ ಮಾಡುತ್ತಿದ್ದೆ..

                  ಇನ್ನು ನನ್ನ ಒಬ್ಬಳು ರೂಂ ಮೇಟ್ ಪುಸ್ತಕ ಹಿಡಿದುಕೊಂಡೇ ಮಲಗುತ್ತಿದ್ದಳಾದರೂ, ಏ ನಿದ್ರೆ ಮಾಡ್ಬೇಡ  ಹೇಳಿದಾಕ್ಷಣ ನಾ ಓದ್ತಾ ಇದೀನಿ ನಿದ್ರೆ ಮಾಡಿಯೇ ಇಲ್ಲ ಎಂದು ಸಾಧಿಸುತ್ತಿದ್ದಳು. .ನಾನು ರಾತ್ರಿ ಬೇಗ ಮಲಗಿ ಬೇಗ ಏಳಬೇಕೆಂದುಕೊಂಡರೆ ಬೇಗ ಏನೋ ಮಲಗುತ್ತಿದ್ದೆನಾದರೂ ಏಳುವುದು ಸ್ವಲ್ಪ ಲೇಟಾಗಿಯೇ ಆಗುತ್ತಿತ್ತು.

   ಸ್ಟಡೀ ಹಾಲೀಡೇಸ್ ಲಿ ಕನಸುಗಳೂ ಬೀಳೋದು ಜಾಸ್ತಿ.. ಎದ್ದ ತಕ್ಷಣ  ಇವತ್ತು ನನ್ನ ಕನಸಿನಲ್ಲಿ ನೀನು ಬಂದಿದ್ದೆ ಎಂದು ಹೇಳುವುದರೊಳಗೇ ಬೆಳಕಾಗುತ್ತಿದ್ದವು.. ಪ್ರತೀ ದಿನವೂ ಒಬ್ಬರಿಗಲ್ಲ ಒಬ್ಬರಿಗೆ ಕನಸು..ಪರೀಕ್ಷೆಯಲ್ಲಿ ಡಿಬಾರ್ ಆದಂತೆ ಒಂದು ಕನಸು ಬಿದ್ರೆ, ಹಾಲ್ ಟಿಕೇಟ್ ಕಾಣೆಯಾದಂತೆ ಇನ್ನೊಂದು ಕನಸು..ಇನ್ನು ಫೇಸ್ಬುಕ್, ಬ್ಲಾಗ್ ಇಂದ ಸ್ವಲ್ಪ ದೂರವಿರೋಣ ಎಂದರೆ ಹಾಳೆಯಲ್ಲಿ ಬರೆದಿಟ್ಟ ಕವನವು ಬಾ ಎಂದು ಕರೆಯುತ್ತಿತ್ತು..

ಪರೀಕ್ಷೆ ಶುರುವಾಗಿ ಎಷ್ಟೊಂದು ದಿನ ಆಗಿತ್ತು ಅಬ್ಬ ಮುಗೀತಲ್ಲ..ಎಂದು ಖುಷಿ ಖುಷಿಯಲ್ಲಿದ್ದರೂ ನಾಳೆಯಿಂದ ಪರೀಕ್ಷೆಯನ್ನು ತುಂಬಾ ಮಿಸ್ ಮಾಡ್ಕೊಳ್ತೀವಿ ಎಂದೆಲ್ಲ ಅನಿಸಲು ಶುರುವಾಗಿತ್ತು.. ಲಾಸ್ಟ್ ಎಕ್ಸಾಂ  ಸೈಕಾಲಜಿ ಆಗಿದ್ದರಿಂದ ಬೇಗ ಬರೆದು ಪೇಪರ್ ಕೊಟ್ಟು ಬಂದರೆ ಸಾಕು ಎನ್ನುವಂತಾಗಿತ್ತು..

ನಿನ್ನೆ  ಮನವೆಲ್ಲಾ ಊರಿನ ಕಡೆಗೆ ಹೋಗುವ ದಿನವನ್ನು, ಅಣ್ಣನ ಮಗನನ್ನು ಎತ್ತಿ ಲಾಲಿ ಹಾಡುವ ಸಮಯವನ್ನು , ಅಮ್ಮನನ್ನು ನೋಡಿ ತಬ್ಬಿಕೊಳ್ಳುವ ಆಸೆಯನ್ನು  , ಅತ್ತಿಗೆ ಹತ್ತಿರ ಕಾಲೇಜಿನ ಸುದ್ದಿಗಳನ್ನೆಲ್ಲಾ ಹೇಳುವ ತವಕವನ್ನು, ಅಣ್ಣ ಹತ್ತಿರ, ಅಪ್ಪನ ಹತ್ತಿರ ಹೇಳುವ ಜೋಕುಗಳನ್ನು ಲೆಕ್ಕ ಹಾಕುತ್ತಿದ್ದ ನನಗೆ ಪರೀಕ್ಷೆ ಮುಗಿದರೂ ರಾತ್ರಿ ನಿದ್ರೆಯೇ ಬರಲಿಲ್ಲ...ಪರೀಕ್ಷೆಯ ದಿನ ಬೇಡವೆಂದರೂ ಬರುತ್ತಿದ್ದ ನಿದ್ರೆಯು ಈಗ ಎಲ್ಲಿ ಸರಿದು ಹೋಯಿತೋ..?